ಮುಂಡಗೋಡ ಪಟ್ಟಣದಲ್ಲಿ ನಡೆದ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದು, ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬಂಧಿತರಿಂದ ಎರಡು ಕಂಟ್ರಿಮೇಡ್ ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.ಬಂಧಿತರನ್ನು ಮಂಜುನಾಥ ನಾಗೇಂದ್ರ ಕಾಜಗಾರ (35), ಶ್ರೀಕಾಂತ್ ಕಿರಣ್ಣನವರ್ (22), ಮಲ್ಲಿಕಾರ್ಜುನ ಬಡಶೆಟ್ಟಿ (22), ಮಂಜುನಾಥ ವಿಷ್ಣು ಬೆಳಗಾಂವ (20) ಹಾಗೂ ದೀಪಕ ನಾಗರಾಜ ನವಲೆ (22) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ನಡೆದ ಹರ್ಷ ಕೊಲೆ ಪ್ರಕರಣದ ಆರೋಪಿ ಮಂಜುನಾಥ ಕಾಜಗಾರನ ಮೀಟರ್ ಬಡ್ಡಿ ವ್ಯವಹಾರಕ್ಕೆ ಜಮೀರ್ ದರ್ಗಾವಾಲೆ ಅಡ್ಡಿಯಾಗಿದ್ದ ಎಂದು ತಿಳಿದುಬಂದಿದೆ. ಮಂಜುನಾಥನ ಬಳಿಯಿದ್ದ ಕೆಲವರನ್ನು ಜಮೀರ್ ತನ್ನತ್ತ ಸೆಳೆದಿದ್ದರಿಂದ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಮಂಜುನಾಥ್, ನಂತರ ಮುಂಡಗೋಡ ತೊರೆದು ಹುಬ್ಬಳ್ಳಿಗೆ ಸ್ಥಳಾಂತರವಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೈಷಮ್ಯದಿಂದ ಜಮೀರ್ ವಿರುದ್ಧ ಸಂಚು ರೂಪಿಸಿ, ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ನೀಡಲಾಗಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಜಮೀರ್ ದರ್ಗಾವಾಲೆ ಮೀಟರ್ ಬಡ್ಡಿ ದಂಧೆಯಿಂದ ಅಪಾರ ಹಣ ಸಂಪಾದಿಸಿದ್ದ ಹಾಗೂ ಹಲವರ ಮೇಲೆ ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿದ್ದ ಎಂಬ ಮಾಹಿತಿ ಕೂಡ ಹೊರಬಂದಿದೆ.
ಕೊಲೆ ಹಿಂದೆ ಮೀಟರ್ ಬಡ್ಡಿ ವ್ಯವಹಾರ, ಹಳೆಯ ದ್ವೇಷ ಮತ್ತು ಆರ್ಥಿಕ ಪೈಪೋಟಿಯೇ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
Laxmi News 24×7