ಬೆಳಗಾವಿಗೆ ಈ ಬಾರಿ ಬೇಸಿಗೆಯ ಬಿಸಿ ಜೋರಾಗಿಯೇ ತಟ್ಟಿದೆ. ನಗರದ ದಾಹ ತಣಿಸುವ ರಾಕಸಕೊಪ್ಪ ಜಲಾಶಯದ ಒಡಲು ಬರಿದಾಗುತ್ತಿದ್ದು, ಮಹಾನಗರದ 58 ವಾರ್ಡ್ಗಳ ಜನತೆಗೆ ಈಗ ನೀರಿನ ತತ್ವಾರ ಶುರುವಾಗಿದೆ. ಮುಂದಿನ ಎರಡು ತಿಂಗಳುಗಳ ಕಾಲ ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ.
ಸೌಮ್ಯ ಹವಾಮಾನಕ್ಕೆ ಹೆಸರಾದ ಬೆಳಗಾವಿಯಲ್ಲಿ ಈ ಬಾರಿ ಸೂರ್ಯನ ಪ್ರತಾಪ ಹೆಚ್ಚಾಗಿದ್ದು, ಅದರ ನೇರ ಪರಿಣಾಮ ಜಲಮೂಲಗಳ ಮೇಲೆ ಬೀರಿದೆ. ಅರ್ಧ ಟಿಎಂಸಿ ಸಾಮರ್ಥ್ಯದ ರಕ್ಕಸಕೊಪ್ಪ ಜಲಾಶಯದಲ್ಲಿ ಈಗ ಕೇವಲ 8 ಅಡಿಯಷ್ಟು ಮಾತ್ರ ನೀರಿನ ಸಂಗ್ರಹವಿದ್ದು, ಜಲಾಶಯ ಸಂಪೂರ್ಣ ಖಾಲಿಯಾಗುವ ಹಂತಕ್ಕೆ ತಲುಪಿದೆ. ಇದರಿಂದಾಗಿ ನಗರದ 58 ವಾರ್ಡ್ಗಳಿಗೆ ಪೂರೈಕೆಯಾಗುವ ನೀರಿನ ವೇಳಾಪಟ್ಟಿಯಲ್ಲಿ ಕೆಯುಐಡಿಎಫಸಿ (KUIDFC) ಅಧಿಕಾರಿಗಳು ಮಹತ್ವದ ಬದಲಾವಣೆ ಮಾಡಿದ್ದಾರೆ.
ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಇನ್ಮುಂದೆ ನಗರಕ್ಕೆ ಪೂರೈಕೆಯಾಗುವ ನೀರಿನ ಅವಧಿಯನ್ನು ಕೇವಲ 1 ಗಂಟೆ 45 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ. ಸದ್ಯದ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಹೊಸ ವೇಳಾಪಟ್ಟಿ ಪ್ರಕಟಿಸಿದ್ದು, 3 ದಿನಕ್ಕೊಮ್ಮೆ ಬರುತ್ತಿದ್ದ ನೀರು ಇನ್ಮುಂದೆ 4 ದಿನಕ್ಕೊಮ್ಮೆ, 4 ದಿನದ ಬದಲು 5 ದಿನಕ್ಕೆ ಹಾಗೂ 5 ದಿನದ ಬದಲು 6 ದಿನಕ್ಕೊಮ್ಮೆ ಪೂರೈಕೆಯಾಗಲಿದೆ.
ಮುಂದಿನ ಎರಡು ತಿಂಗಳುಗಳ ಕಾಲ ಮಳೆ ಬರುವವರೆಗೆ ಸಾರ್ವಜನಿಕರು ಲಭ್ಯವಿರುವ ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ವಾಹನ ತೊಳೆಯಲು ಅಥವಾ ಅನಗತ್ಯ ಕೆಲಸಗಳಿಗೆ ಕುಡಿಯುವ ನೀರನ್ನು ವ್ಯರ್ಥ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ ವರುಣದೇವ ಕೃಪೆ ತೋರದಿದ್ದರೆ ಬೆಳಗಾವಿ ಜನತೆಗೆ ಈ ಬೇಸಿಗೆ ಕಡು ಕಷ್ಟವಾಗುವುದರಲ್ಲಿ ಸಂಶಯವಿಲ್ಲ.
Laxmi News 24×7