ಚಿಕ್ಕೋಡಿ (ಬೆಳಗಾವಿ) : ಸರ್ಕಾರ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ನಾವು ಅದರ ಪೂರ್ವಭಾವಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಸದ್ಭಕ್ತರ ಭಾವನೆ ಹಾಗೂ ವಿಚಾರಗಳನ್ನು ತಿಳಿದುಕೊಂಡು ಸಮೀಕ್ಷೆ ಪಟ್ಟಿಯಲ್ಲಿ ಏನನ್ನು ಬರೆಯಿಸಬೇಕು ಅಂತ ಸಮಾಲೋಚನೆಯನ್ನು ಮಾಡುತ್ತಿದ್ದೇವೆ ಎಂದು ಹರಿಹರ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಹೇಳಿದ್ದಾರೆ.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರುವ ದಿನಾಂಕ 28 ರಿಂದ ಅಕ್ಟೋಬರ್ 7ರವರೆಗೆ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಹಿಂದುಳಿದ ಆಯೋಗದ ಸಮೀಕ್ಷೆ ಪಟ್ಟಿಯಲ್ಲಿ ಪಂಚಮಸಾಲಿ ಲಿಂಗಾಯತ ಸಂಖ್ಯೆ 1010 ಹಾಗೂ ಇನ್ನೊಂದು ಕಡೆ ವೀರಶೈವ ಪಂಚಮಸಾಲಿ ಲಿಂಗಾಯತ ಸಂಖ್ಯೆ 1367 ಎಂದು ಇದೆ. ಇವರೆಡರಲ್ಲಿಯೇ ನಾವು ಏನೇ ಬರೆಸಬೇಕಿದ್ದರೂ ಬರೆಯಿಸಬೇಕು ಎಂದು ಹೇಳಿದ್ದಾರೆ.
ಹಿಂದುಳಿದ ಆಯೋಗ 14 ಜಾತಿ ಪಟ್ಟಿ ಕಾಲಂಗಳನ್ನು ಮಾಡಿದೆ. ಅದರಲ್ಲಿ ಎರಡು ಕಡೆ ಪಂಚಮಸಾಲಿ ಎಂದು ನಮೋದನೆ ಮಾಡಲಾಗಿದೆ. ಎಲ್ಲವೂ ಕೂಡಾ ತಂತ್ರಾಂಶ ಆಗಿರುವುದರಿಂದ (ಡಿಜಿಟಲೀಕರಣ) ನಾವು ಜಿಲ್ಲಾವಾರು ಸಭೆ ಮಾಡಿ ಜನರಿಗೆ ತಿಳಿವಳಿಕೆ ನೀಡುತ್ತಿದ್ದೇವೆ, ಎಲ್ಲಾ ಕಡೆಯೂ ಪಂಚಮಸಾಲಿ ಲಿಂಗಾಯತ ಎಂದು ಉಲ್ಲೇಖ ಮಾಡುವಂತೆ ತಿಳಿಸಲಾಗಿದೆ ಎಂದಿದ್ದಾರೆ.
ಈ ಕುರಿತು ದಿನಾಂಕ 16/9/2025 ರಂದು ಹರಿಹರ ಪೀಠದಲ್ಲಿ ಟ್ರಸ್ಟ್ ಹಾಗೂ ಹಿರಿಯರು ಕುಳಿತುಕೊಂಡು ಸಭೆ ಮಾಡುತ್ತೇವೆ. ದಿನಾಂಕ 17/9/2025 ರಂದು ಪಂಚಮಸಾಲಿ ಪೀಠದ ಎಲ್ಲ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸಭೆ ಮಾಡಿ ಸಭೆಯ ನಿರ್ಣಯವನ್ನು ಸಮಾಜಕ್ಕೆ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ. ಪಂಚಮಸಾಲಿ ಯುವ ಘಟಕ, ಮಹಿಳಾ ಘಟಕ, ವಿವಿಧ ಪಂಚಮಸಾಲಿ ಸಂಘಟನೆಗಳು ಸಮೀಕ್ಷಾ ಪಟ್ಟಿಯಲ್ಲಿ ಅದನ್ನೇ ಬರೆಸಬೇಕು ಎಂದು ಹೇಳಿದ್ದಾರೆ.