ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ (2018 ರಿಂದ 2023) ರಾಜ್ಯದ ಒಟ್ಟು ವೆಚ್ಚವು ಶೇ.36ರಷ್ಟು ಹೆಚ್ಚಾಗಿತ್ತು. ಈ ಪೈಕಿ 2022-23ರ ಒಂದು ವರ್ಷದ ಅವಧಿಯಲ್ಲಿ ರಾಜಸ್ವ ವೆಚ್ಚವು ಒಟ್ಟು ವೆಚ್ಚದ ಶೇಕಡಾ 78 ರಷ್ಟಿದೆ (2.15 ಲಕ್ಷ ಕೋಟಿ) ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ವಿಧಾನಸಭೆಯಲ್ಲಿ ಇಂದು ವರದಿಯನ್ನು ಮಂಡಿಸಲಾಯಿತು. ವಿವಿಧ ಇಲಾಖೆಗಳು ಮತ್ತು ಬಾಬ್ತುಗಳ ಪರಿಶೀಲನೆಯ ಹಿನ್ನೆಲೆಯಲ್ಲಿ ವೆಚ್ಚದ ಒಟ್ಟು ಸ್ವರೂಪವನ್ನು ಸಿಎಜಿ ಸಿದ್ಧಪಡಿಸಿದೆ. ಈ ಅವಧಿಯಲ್ಲಿ ಬಂಡವಾಳ ವೆಚ್ಚ (ರಾಜ್ಯದ ವಿವಿಧ ಆಸ್ತಿಗಳ ಸೃಜನೆಗೆ ಬಳಸುವ ಹಣ) ಒಟ್ಟು ವೆಚ್ಚದ ಕೇವಲ 19 ರಿಂದ 20ರಷ್ಟು ಮಾತ್ರ ಆಗಿದೆ ಎಂಬುದು ವರದಿಯಿಂದ ಗೊತ್ತಾಗಿದೆ.
ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನವನ್ನು ಪ್ರಮುಖವಾಗಿ ಉದಾಹರಿಸಿರುವ ಸಿಎಜಿ, ಹಲವು ನ್ಯೂನತೆಗಳನ್ನು ಗುರುತಿಸಿದೆ. 2023ರವರೆಗೆ ತಾಲ್ಲೂಕು ಮಟ್ಟದಲ್ಲಿ ಕೌಶಲ್ಯ ಮಿಷನ್ಗಳನ್ನು ಸ್ಥಾಪಿಸಿರಲಿಲ್ಲ. ಸರ್ಕಾರದ ನೀತಿಯ ಪ್ರಕಾರ ತಾಲ್ಲೂಕು ಕೌಶಲ್ಯ ಮಿಷನ್ಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿತ್ತು.
ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕರನ್ನು ಸಬಲೀಕರಣಗೊಳಿಸುವ ಯೋಜನೆಗಾಗಿ ಅಸ್ತಿತ್ವಕ್ಕೆ ಬಂದ ಕೌಶಲಕಾರ್ ವೆಬ್ಸೈಟ್ ತಂತ್ರಾಂಶ ಸಮಸ್ಯೆಗಳು ಹೇರಳವಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ವಿದ್ಯಾರ್ಥಿ ನೋಂದಣಿಯ ವೇಳೆ ಆಧಾರ್ ದೃಢೀಕರಣ ಒಳಗೊಂಡಿಲ್ಲ. ನಕಲಿ ಆಧಾರ್ ಸಂಖ್ಯೆಗಳ ಮೂಲಕ ಬಹು ನೋಂದಣಿಗಳನ್ನು ಮಾಡಿ ಲೋಪ ಎಸಗಲಾಗಿದೆ. ಅಭ್ಯರ್ಥಿಯ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯನ್ನೂ ಕಡೆಗಣಿಸಲಾಗಿದೆ. ಅಪ್ರಾಪ್ತ ವಯಸ್ಕರನ್ನು ಯೋಜನೆಯಡಿ ಆಯ್ಕೆ ಮಾಡಲಾಗಿದೆ. ದಾಖಲೆಗಳ ಪ್ರಕಾರ ಒಂದು ವರ್ಷ ತುಂಬದ ವಿದ್ಯಾರ್ಥಿಯನ್ನೂ 2018- 19ರ ಅವಧಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸಿಎಜಿ ಕೌಶಲ್ಯ ಯೋಜನೆಯ ವೈಫಲ್ಯಕ್ಕೆ ಉದಾಹರಣೆಗಳನ್ನು ನೀಡಿದೆ. ಇಂತಹ ಅನೇಕ ಲೋಪಗಳನ್ನು ವಿವರಿಸಿ, ಸರ್ಕಾರಿ ಇಲಾಖೆಗಳು ತಪ್ಪಿಸಬಹುದಾಗಿದ್ದ ವೆಚ್ಚದ ಬಗ್ಗೆಯೂ ಸಿಎಜಿ ವರದಿ ಉಲ್ಲೇಖಿಸಿದೆ.
Laxmi News 24×7