ಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ನಾರಾಯಣ್ ಲಾಲ್, ಪುಷ್ಪೇಂದ್ರ ಸಿಂಗ್, ಕೀರ್ತನ್ ರಾಮ್, ಮಹೇಂದ್ರ ಗೆಹ್ಲೋಟ್ ಹಾಗೂ ದಿಲೀಪ್ ಕುಮಾರ್ ಎಂಬಾತನನ್ನ ಬಂಧಿಸಲಾಗಿದ್ದು, 50 ಲಕ್ಷ ರೂಪಾಯಿ ಮೌಲ್ಯದ 480 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ. ಆರ್. ಪುರಂ ವ್ಯಾಪ್ತಿಯಲ್ಲಿ ಮನೆ, ಅಂಗಡಿಗಳಿಗೆ ಫೆನಾಯಿಲ್ ಸರಬರಾಜು ಮಾಡಿಕೊಂಡಿದ್ದ ನಾರಾಯಣ್ ಲಾಲ್, ಸೀಗೇಹಳ್ಳಿಯ ಭವಾನಿ ಜ್ಯುವೆಲ್ಲರಿ ಶಾಪ್ನಲ್ಲಿ ಮಾಲೀಕ ಹಾಗೂ ಒಬ್ಬನೇ ಕೆಲಸಗಾರ ಇರುತ್ತಿದ್ದುದನ್ನ ಗಮನಿಸಿದ್ದ. ರಾಜಸ್ಥಾನದಲ್ಲಿರುವ ಸ್ನೇಹಿತರು, ಮಾದನಾಯಕನಹಳ್ಳಿ ಬಳಿ ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಗೆಹ್ಲೋಟ್ನನ್ನ ಒಗ್ಗೂಡಿಸಿ ಚಿನ್ನದಂಗಡಿ ದೋಚಲು ಸ್ಕೆಚ್ ರೂಪಿಸಿದ್ದರು. ಹೀಗೆ ಎಲ್ಲರೂ ಸೇರಿ ಮೇ 9ರಂದು ಸಂಜೆ 4 ಗಂಟೆ ಸುಮಾರಿಗೆ ಮುಸುಕುಧಾರಿಗಳಾಗಿ ಚಿನ್ನದಂಗಡಿಗೆ ನುಗ್ಗಿ, ಕೆಲಸಗಾರನಿಗೆ ಚಾಕು ತೋರಿಸಿ 480 ಗ್ರಾಂ ಚಿನ್ನದ ಸರಗಳನ್ನ ಕದ್ದೊಯ್ದಿದ್ದರು ಎಂದಿದ್ದಾರೆ.ಇತ್ತ ಅಂಗಡಿ ಮಾಲೀಕ ನೀಡಿದ್ದ ದೂರಿನನ್ವಯ ಕಾರ್ಯಪ್ರವೃತ್ತರಾದ ಸಿಬ್ಬಂದಿ ರಾಜಸ್ಥಾನಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ
Laxmi News 24×7