ಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು ಉಳಿಸುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋಎಂಟ್ರಾಲಾಜಿ ತಜ್ಞವೈದ್ಯರ ತಂಡವು ಯಶಸ್ವಿಯಾಗಿದೆ. ತಂದೆಯನ್ನು ಉಳಿಸಿಕೊಳ್ಳುವ ಛಲತೊಟ್ಟಿದ್ದ ಮಗ ಲಿವರ್ ದಾನ ಮಾಡಿ ತಂದೆ-ಮಗನ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.
ರಾಯಬಾಗ ತಾಲೂಕಿನ 56 ವರ್ಷದ ರೈತನ ಲಿವರ್ ಸಂಪೂರ್ಣವಾಗಿ ಕಾರ್ಯಕ್ಷಮತೆ ಕಳೆದುಕೊಂಡಿತ್ತು. ಲಿವರ್ ಶಸ್ತ್ರಚಿಕಿತ್ಸೆ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ವಿಳಂಬ ಮಾಡಿದರೆ ಜೀವಕ್ಕೆ ಅಪಾಯವಿದ್ದ ಹಿನ್ನೆಲೆಯಲ್ಲಿ ಅವರ 29 ವರ್ಷದ ಮಗ ಲಿವರ್ ದಾನ ಮಾಡಿದರು.
ಜೀವಂತ ವ್ಯಕ್ತಿಯ ಲಿವರ್ ತೆಗೆದು ಲಿವರ್ ಹಾಳಾದ ರೋಗಿಗೆ ಕಸಿ ಮಾಡಬೇಕಾಗಿತ್ತು. ಅತ್ಯಂತ ಕ್ಲಿಷ್ಟಕರವಾದ ಈ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ, ರೋಗಿಗೆ ಪುನರ್ಜನ್ಮ ನೀಡುವಲ್ಲಿ ಕೆಲ್ಇ ವೈದ್ಯರ ತಂಡ ಯಶಸ್ವಿಯಾಗಿದೆ.
ಮುಖ್ಯ ಗ್ಯಾಸ್ಟ್ರೋಎಂಟ್ರಾಲಾಜಿಸ್ಟ್ ಹಾಗೂ ಲೀವರ್ ತಜ್ಞವೈದ್ಯ ಡಾ. ಸಂತೋಷ ಹಜಾರೆ ಮಾತನಾಡಿ, ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿಯೇ ಜೀವಂತ ದಾನಿಯ ಲಿವರ್ ಕಸಿ ಮಾಡಿರುವುದು ಇದೇ ಮೊದಲು. ಕೊನೆಯ ಹಂತದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಯ ಜೀವವನ್ನು ಉಳಿಸಲು ಅವರ 29 ವರ್ಷದ ಮಗ ತನ್ನ ಲಿವರ್ನ ಸ್ವಲ್ಪ ಭಾಗವನ್ನು ದಾನ ಮಾಡಿದ್ದು, ಶಸ್ತ್ರಚಿಕಿತ್ಸೆಯ ನಂತರ ದಾನಿ ಮತ್ತು ದಾನ ಪಡೆದ ರೋಗಿಯೂ ಕೂಡ ಗುಣಮುಖರಾಗಿದ್ದು, ದಾನಿ (ಮಗ) 8ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ ಎಂದರು.
Laxmi News 24×7