ವಿಜಯಪುರ, ಜೂನ್ 27: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಾಲದ (Debt) ಹಣ (money) ವಸೂಲಿ ಮಾಡುವ ನೆಪದಲ್ಲಿ ವ್ಯಕ್ತಿಯನ್ನು ಒತ್ತೆಯಾಗಿಟ್ಟುಕೊಂಡಿರೋ ಗಂಭೀರ ಆರೋಪ ಕೇಳಿ ಬಂದಿದೆ.
ಸಾಲ ಪಡೆದ ಹಣ ನೀಡದೇ ಇದ್ದ ಕಾರಣಕ್ಕೆ ಕಳೆದ 27 ದಿನಗಳಿಂದ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದ ಉದಯಕುಮಾರ ಬಾವಿಮನಿ ಎಂಬುವವರನ್ನು ಬಸವನಬಾಗೇವಾಡಿ ಪಟ್ಟಣದ ನಿವಾಸಿ ಪ್ರಭಾಕರ ಢವಳಗಿ ಎಂಬುವವರು ಕೂಡಿಟ್ಟುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಇತ್ತ ಉದಯಕುಮಾರನನ್ನು ಬಿಡಿಸಲು ಕುಟುಂಬಸ್ಥರು ಪರದಾಡುತ್ತಿದ್ದಾರೆ.ಉದಯಕುಮಾರ ಬೆಂಗಳೂರಿನಲ್ಲಿ ಖಾಸಗಿ ಶಾಲಾ ಶಿಕ್ಷಕರಾಗಿದ್ದಾರೆ.
ಸಾಲ ನೀಡಿರುವ ಪ್ರಭಾಕರ ಢವಳಗಿ ಕೂಡ ಶಿಕ್ಷಕರಾಗಿದ್ದು, ನಿವೃತ್ತರಾಗಿದ್ದಾರೆ. 31.50 ಲಕ್ಷ ರೂ ಹಣ ಸಾಲದ ಹಣ ನೀಡಬೇಕೆಂದು ಉದಯಕುಮಾರ ಮನೆಯವರಿಗೆ ಪ್ರಭಾಕರ ಹೇಳುತ್ತಿದ್ದಾರೆ.ಉದಯಕುಮಾರ ಗೋವಾಕ್ಕೆ ಹೋಗಿದ್ದಾಗ ಅಲ್ಲಿಂದಲೇ ಅವರನ್ನು ಪ್ರಭಾಕರ ಢವಳಗಿ ಕರೆದುಕೊಂಡು ಹೋಗಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಪ್ರಭಾಕರ ಬಳಿ ಉದಯಕುಮಾರ ಏಕೆ ಹಾಗೂ ಎಷ್ಟು ಸಾಲ ಮಾಡಿದ್ದಾರೆಂದು ಗೊತ್ತಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.