ಬೆಳಗಾವಿ: ವಾರಕರಿಗಳ ನೇತೃತ್ವದಲ್ಲಿ ತಾಳ ಹಾಕುತ್ತಾ, ತಂಬೂರಿ-ಭಜನೆ ಬಾರಿಸುತ್ತಾ, ವೀಣೆ ನುಡಿಸುತ್ತಾ, ಅಭಂಗಗಳ ಮೂಲಕ ವಿಠ್ಠಲನ ನಾಮ ಸ್ಮರಿಸುತ್ತಾ, ತಲೆಯ ಮೇಲೆ ತುಳಸಿ ಹೊತ್ತು, ಕೈಯಲ್ಲಿ ವಿಠಲನ ಧ್ವಜ ಹಿಡಿದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಂಢರಪುರದತ್ತ ಭಕ್ತರ ಪಾದಯಾತ್ರೆ ಹೊರಟಿದೆ. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಭಕ್ತವರ್ಗ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಹೌದು, ಈ ಎಲ್ಲ ದೃಶ್ಯ ಕಂಡು ಬಂದಿದ್ದು, ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ. ಬೆಳಗಾವಿ ತಾಲೂಕಿನ ಸುಳಗಾ (ಯಳ್ಳೂರ) ಗ್ರಾಮದ ವಿಠ್ಠಲನ ಭಕ್ತರು ಮಹಾರಾಷ್ಟ್ರದ ಐತಿಹಾಸಿಕ ಪಂಢರಪುರದ ಕಡೆ ಪಾದಯಾತ್ರೆ ಕೈಗೊಂಡಿದ್ದಾರೆ. ಧಾರಾಕಾರವಾಗಿ ಮಳೆ ಆಗುತ್ತಿರುವುದರಿಂದ ಜಾಕೇಟ್ ಧರಿಸಿಯೇ ಮುಂದೆ ಸಾಗಿದ್ದಾರೆ.
ಪ್ರತಿ ವರ್ಷ ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿ ಬಂತೆಂದರೆ ಸಾಕು ಜಿಲ್ಲೆಯ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ವಿಠ್ಠಲನ ದರ್ಶನ ಪಡೆಯಲು ಹೆಜ್ಜೆ ಹಾಕುವುದು ರೂಢಿ. ಸುಮಾರು 350 ಕಿ. ಮೀ. ದೂರ ನಡೆದುಕೊಂಡೆ ಭಕ್ತರು ಪಂಢರಪುರಕ್ಕೆ ಹೋಗುತ್ತಾರೆ. ಈ ಬಾರಿ ಜುಲೈ 6ರಂದು ಆಷಾಢ ಏಕಾದಶಿ ಹಿನ್ನೆಲೆ ನೂರಾರು ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಮಳೆರಾಯನ ಆರ್ಭಟದ ಮುಂದೆ ತಮ್ಮ ಭಕ್ತಿಯೇ ಹೆಚ್ಚು ಎನ್ನುವಂತೆ ಉತ್ಸಾಹದಿಂದ ನಡೆದಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು, ಮಹಿಳೆಯರು, ಬಡವ, ಶ್ರೀಮಂತ ಎಂಬ ಬೇಧಬಾವವಿಲ್ಲದೇ ಎಲ್ಲರೂ ಪಂಢರಪುರದಲ್ಲಿ ವಿಠ್ಠಲ-ರುಕ್ಮಿಣಿ ಕಾಣಲು ಹೋಗುವುದು ಸಂಪ್ರದಾಯವಾಗಿದೆ.