ಹುಬ್ಬಳ್ಳಿ(ಧಾರವಾಡ): ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡು, ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ವಿಶೇಷ ಚೇತನ ವ್ಯಕ್ತಿ ಮಿತಿಲೇಶ್ ಕುಮಾರ್ ಎಂಬಾತನನ್ನು ಆತನ ಸ್ನೇಹಿತ ರಾಜೇಶ್ ಕುಮಾರ್ ಅಲಿಯಾಸ್ ನಸೀರ್ ಖಾನ್ ಹತ್ಯೆ ಮಾಡಿದ್ದಾನೆ. ಭಾನುವಾರ ರಾಜೇಶ್ ಕುಮಾರ್ ಮದ್ಯದ ಅಮಲಿನಲ್ಲಿ ಮಿತಿಲೇಶ್ ಕುಮಾರ್ ಜತೆ ತಂಟೆ ತೆಗೆದು ಹೊಡೆದಾಡಿಕೊಂಡಿದ್ದಾರೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿ ರಾಜೇಶ್ ಮಿತಿಲೇಶನಿಗೆ ಮೈಕ್ ಸೆಟ್ನಿಂದ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಿತಿಲೇಶನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಲು ಯತ್ನಿಸಿದರೂ ಮಾರ್ಗಮಧ್ಯದಲ್ಲಿ ಆತ ಅಸುನೀಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಮಿತೇಶ ಮತ್ತು ಕೊಲೆಗೈದ ರಾಜೇಶ್ ಸ್ನೇಹಿತರಾಗಿದ್ದು, ಇಬ್ಬರು ಬಿಹಾರ ಮೂಲದವರು. ಇಬ್ಬರೂ ಅಂಗವೈಕಲ್ಯ ಹಿನ್ನೆಲೆ ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಭಿಕ್ಷೆ ಬೇಡಿ ಇಬ್ಬರು ಜೀವನ ನಡೆಸುತ್ತಿದ್ದರು. ಆದರೆ ಭಾನುವಾರ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.