ಹಾವೇರಿ : ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಶತ 7 ರಷ್ಟಾದರೂ ಆಗಿದೆಯಲ್ಲ. ಹೆಚ್. ಕೆ. ಪಾಟೀಲ್ ಇನ್ನಷ್ಟು ವೇಗ ಪಡೆಯಲಿ ಎಂದಿದ್ದಾರೆ. ತೃಪ್ತಿ ತಂದಿಲ್ಲ. ಆದರೆ ಅವರು ನೆನಪು ಮಾಡಿದ ನಂತರ ಮತ್ತಷ್ಟು ವೇಗ ಪಡೆಯುತ್ತೆ ಎಂದು ತಿಳಿಸಿದರು.
ಇದೇ ವೇಳೆ ಬಿ. ಆರ್. ಪಾಟೀಲ್ ಆಡಿಯೋ ವೈರಲ್ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ. ಹೆಚ್ಚಿನ ಕ್ರಮ ಏನಾಗಬೇಕು ಅದನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ರಾಣೆಬೆನ್ನೂರು ತಾಲೂಕಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟವಿದೆ. ಈಗಾಗಲೇ ನಾಲ್ಕು ಅಂಗಡಿಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಅವುಗಳ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡಿದ್ದೇವೆ ಎಂದು ಸಚಿವರು ಹೇಳಿದರು.
ರಾಣೆಬೆನ್ನೂರು ಬೀಜೋತ್ಪಾದನೆಯ ಕೇಂದ್ರವಾಗಿದ್ದು, ಇದೀಗ ಕಳಪೆ ಬಿತ್ತನೆ ಬೀಜ ಕೇಂದ್ರವಾಗುತ್ತಿದೆ ಎಂಬ ಆರೋಪವನ್ನ ಸಚಿವ ಶಿವಾನಂದ ಪಾಟೀಲ್ ತಳ್ಳಿಹಾಕಿದರು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ, ಕೃಷಿ ಅಧಿಕಾರಿಗೆ ಕಟ್ಟಾಜ್ಞೆ ಮಾಡಿದ್ದೇನೆ. ಹಾವೇರಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಿದ ಸೋಯಾಬಿನ್ ಕಳಪೆಯಾಗಿವೆ. ಈ ಕುರಿತಂತೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ರೈತರ ಬಿತ್ತನೆ ಬೀಜ ಖರೀದಿಸಿದರೆ ಅಡುಗೆ ಎಣ್ಣೆ ಕಡ್ಡಾಯ ಖರೀದಿ ಮಾಡಬೇಕು ಎಂಬ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಾನು ಉಸ್ತುವಾರಿ ಸಚಿವನಾಗಿದ್ದಕ್ಕೂ, ರೈತರ ಆತ್ಮಹತ್ಯೆ ಹೆಚ್ಚಳಕ್ಕೂ ಸಂಬಂಧವಿಲ್ಲ: ರೈತರ ಆತ್ಮಹತ್ಯೆಯಲ್ಲಿ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇದಕ್ಕೆ ನೀವು ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಗರಂ ಆದ ಅವರು, ಮಾಧ್ಯಮದವರು ಕಾಂಟ್ರವರ್ಸಿ ಮಾಡಬಾರದು. ನಾನು ಯಾವತ್ತೂ ಸಹ ರೈತರ ಜೊತೆ ಇರುತ್ತೇನೆ. ಆಕಸ್ಮಿಕವಾದ ಸಣ್ಣ ಘಟನೆಗಳನ್ನೂ ಸಹ ರೈತರ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತದೆ. ನಾನು ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದಕ್ಕೂ ಜಿಲ್ಲೆ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
Laxmi News 24×7