ಚಾಮರಾಜನಗರ : ಹುಲಿ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ದೇಶಿಪುರ ಕಾಲೋನಿಯ ಪುಟ್ಟಮ್ಮ ಎಂಬಾಕೆ ಹುಲಿಗೆ ಬಲಿಯಾಗಿರುವ ದುರ್ದೈವಿ. ಇಂದು ಮಧ್ಯಾಹ್ನ ಕಾಲೋನಿ ಸಮೀಪ ಕುರಿಗಳನ್ನು ಮೇಯಿಸುವಾಗ ಹುಲಿಯೊಂದು ಅವರ ಮೇಲೆರಗಿದ್ದು ಕುತ್ತಿಗೆ, ಎದೆಭಾಗ, ಹೊಟ್ಟೆ ಭಾಗದಲ್ಲಿ ಬಲವಾಗಿ ದಾಳಿ ನಡೆಸಿ ಕೊಂದುಹಾಕಿದೆ. ಬಳಿಕ, ಮಹಿಳೆಯನ್ನು ಅರಣ್ಯದೊಳಗೆ ಎಳೆದೊಯ್ದಿತ್ತು.
ಬಳಿಕ, ಗ್ರಾಮಸ್ಥರು ಹುಡುಕಾಡಿದ್ದರಿಂದಾಗಿ ಪುಟ್ಟಮ್ಮನ ಶವ ದೊರೆತಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಹುಲಿ ದಾಳಿ ನಡೆದಿದೆ.
ಈ ಕುರಿತು ಬಂಡೀಪುರ ಸಿಎಫ್ಒ ಪ್ರಭಾಕರನ್ ಪ್ರತಿಕ್ರಿಯಿಸಿ, ‘ಮಹಿಳೆ ಹುಲಿ ದಾಳಿಗೆ ಮೃತಪಟ್ಟಿರುವುದು ದೃಢಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಎರಡನೇ ಪ್ರಕರಣ : ಕಳೆದ 10 ರಂದು ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ದೇಹದ ಅಲ್ಪಸ್ವಲ್ಪ ತಿಂದಿತ್ತು. ಬಳಿಕ, ಬಿಆರ್ಟಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಲವೇ ತಾಸುಗಳಲ್ಲಿ ಹುಲಿ ಸೆರೆ ಹಿಡಿದಿದ್ದರು
Laxmi News 24×7