ಮೈಸೂರು: ನಗರದ ಬನ್ನೂರು ರಸ್ತೆಯಲ್ಲಿನ ಜ್ಞಾನಸರೋವರ ಅಂತಾರಾಷ್ಟ್ರೀಯ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಸತತ ಆರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಸ್ಥಳೀಯ ಪೊಲೀಸರು, ಬೆದರಿಕೆ ಸಂದೇಶ ಹುಸಿ ಎಂದು ಖಚಿತ ಪಡಿಸಿದ್ದಾರೆ. ಆದರೆ, ಬಾಂಬ್ ಬೆದರಿಕೆ ಸಂದೇಶದಿಂದ ಶಾಲಾ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬುಧವಾರ ಮಧ್ಯಾಹ್ನ ಶಾಲೆಯ ಇ-ಮೇಲ್ ಐಡಿಗೆ ಕಿಡಿಗೇಡಿಯೊಬ್ಬ ಅಹಮದಬಾದ್ನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯ ಸಿಗದೇ ಇದ್ದರೆ ಶಾಲೆಯನ್ನು ಬಾಂಬ್ನಿಂದ ಸ್ಫೋಟಗಳಿಸಲಾಗುವುದು ಎಂಬ ಸಂದೇಶವನ್ನು ಕಳುಹಿಸಿದ್ದ. ಸಂದೇಶದ ಬಗ್ಗೆ ತಕ್ಷಣ ಶಾಲೆಯ ಸಿಬ್ಬಂದಿ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಶಾಲೆಯ ಸಿಇಒ ಪವನ್ ಶೆಟ್ಟಿ ಅವರು ಎಸ್ಪಿ ವಿಷ್ಣುವರ್ಧನ್ ಅವರಿಗೆ ಮಾಹಿತಿ ನೀಡಿದ್ದರು.ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಮೈಸೂರು ದಕ್ಷಿಣ ಠಾಣೆ ಪೊಲೀಸರೊಂದಿಗೆ ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರೀಯದಳ, ಶ್ವಾನದಳ ಮತ್ತು ಬೆರಳಚ್ಚು ತಂಡ ಭೇಟಿ ನೀಡಿ ಆರು ಗಂಟೆಗೂ ಹೆಚ್ಚು ಕಾಲ ಶಾಲಾ ಆವರಣದಲ್ಲಿ ಶೋಧ ಕಾರ್ಯ ನಡೆಸಿತು.