ಬೆಂಗಳೂರು : ಕಾರ್ಮಿಕರ ಕೆಲಸದ ಸಮಯ ಗರಿಷ್ಠ ಮಿತಿಯನ್ನು ದಿನಕ್ಕೆ 9 ರಿಂದ 10 ಗಂಟೆಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಪ್ರಸ್ತುತ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮವಿದೆ. ಈಗ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.
ಕಾನೂನು ತಿದ್ದುಪಡಿ ವಿಚಾರ ಈಗ ಚರ್ಚೆಯ ಹಂತದಲ್ಲಿದ್ದು, ಈ ಸಂಬಂಧ ರಾಜ್ಯ ಸರ್ಕಾರ ವಿಕಾಸಸೌಧದಲ್ಲಿ ಇಂದು ಮನೋಜ್ ಜೋಶಿ ಅವರ ಸಮಿತಿ, ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದೆ. ಈ ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಮಿಕ ಸಂಘಟನೆಗಳು ಪರ, ವಿರೋಧ : ಕೆಲಸದ ಅವಧಿ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆಗಳು ಪರ, ವಿರೋಧ ವ್ಯಕ್ತಪಡಿಸಿವೆ. ಸಭೆ ನಂತರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಸರ್ಕಾರದ ಚಿಂತನೆಯನ್ನು ಅರ್ಥನೇ ಮಾಡಿಕೊಳ್ತಿಲ್ಲ ಕಾರ್ಮಿಕ ಸಂಘಟನೆಗಳು ವಾರದಲ್ಲಿ 48 ಗಂಟೆ ಮಾತ್ರ ಕೆಲಸ ಮಾಡಿಸೋದು, 10 ಗಂಟೆಗೆ ಅವಧಿ ಹೆಚ್ಚಳ ಮಾಡಿದ್ರೆ ವ್ಯತ್ಯಾಸ ಆಗಲ್ಲ ಎಂದು ಹೇಳಿದರು. ವಾರದಲ್ಲಿ ಎರಡು ದಿನ ರಜೆ ಇರುತ್ತದೆ. ಒಟ್ಟಾರೆ ಸಮಯ ಅಷ್ಟೇ ಆಗುತ್ತದೆ. ಸರ್ಕಾರದ ಚಿಂತನೆಯನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ ಮಾತನಾಡಿ, ಯಾವುದೇ ಕಾರಣಕ್ಕೂ ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಬಾರದು. ಕಾರ್ಮಿಕರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಬಾರದು. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇವೆ. ಇದು ಕಾರ್ಮಿಕರಿಗೆ ಹೊರೆ ಆಗುತ್ತದೆ. ಯಾವುದೇ ಕಾರಣಕ್ಕೂ ಜಾರಿ ಆಗಬಾರದು ಎಂದು ಹೇಳಿದರು.