ಗಂಗಾವತಿ(ಕೊಪ್ಪಳ): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಮಾಡಿಕೊಂಡೇ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು ಜನಸಾಮಾನ್ಯರು, ರೈತಾಪಿ ವರ್ಗದವರಿಂದ ನಗದು ಹಣ ಪಡೆದುಕೊಂಡು ನಿಗಮದ ಹಣವನ್ನು ಅವರ ಖಾತೆಗೆ ಹಾಕುವ ಮೂಲಕ ವಂಚಿಸಿದ್ದಾರೆ ಎಂದು ದೂರಿದರು.ಈ ಜಾಲದಲ್ಲಿ ಸಿಲುಕಿದವರೆ ಇಡಿಗೆ ಮಾಹಿತಿ ನೀಡಿದ್ದಾರೆ. ನಿಗಮದಿಂದ ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆಯೋ ಅವರೆಲ್ಲರನ್ನೂ ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಎಲ್ಲಾ ಪೂರಕ ಮಾಹಿತಿ ಆಧಾರಿಸಿಯೇ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡಿದೆ ಎಂದು ಹೇಳಿದರು.
ಜಾರಿ ನಿರ್ದೇಶನಾಲಯ (ಇ.ಡಿ) ಎಂದರೆ ಸಾಮಾನ್ಯ ಇಲಾಖೆಯಲ್ಲ. ಇತ್ತೀಚೆಗೆ ತರಲಾಗಿರುವ ತಿದ್ದುಪಡಿ ನಿಯಮಗಳ ಅನ್ವಯ ಯಾವುದೇ ದಾಖಲೆಗಳಿಲ್ಲದೇ ಇಡಿ ದಾಳಿ ಮಾಡುವಂತಿಲ್ಲ. ಇದು ಇತರೆ ಸಿಐಡಿ, ಸಿಬಿಐ, ಪೊಲೀಸ್ ಸೇರಿದಂತೆ ಇತರೆ ಸಾಮಾನ್ಯ ಇಲಾಖೆಯಂತೆ ಕೆಲಸ ಮಾಡಲ್ಲ. ಯಾವುದೇ ಸಾಕ್ಷಿ, ಪುರಾವೆಗಳಿಲ್ಲದೇ ಯಾವುದೇ ಕಾರಣಕ್ಕೂ ಜಾರಿ ನಿರ್ದೇಶನಾಲಯ ಯಾವುದೇ ವ್ಯಕ್ತಿಯ ಮನೆಯ ಮೇಲೆ ದಾಳಿ ಮಾಡುವುದಿಲ್ಲ. ಎಲ್ಲಾ ಮಾಹಿತಿ ಪಡೆದುಕೊಂಡೇ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಖಾತೆಗಳಿಗೆ ವರ್ಗಾವಣೆಯಾಗಿರುವ ಲಿಂಕ್, ಖಾತೆ ಮಾಹಿತಿ ಆಧಾರಿಸಿ ದಾಳಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಲವು ಮಹತ್ವ ದಾಖಲೆ ಸಿಕ್ಕಿವೆ. ಇಷ್ಟಾದಾರೂ ಕಾಂಗ್ರೆಸ್ ಸರ್ಕಾರ ತಮ್ಮ ತಪ್ಪನ್ನು ಮರೆಮಾಚಿಕೊಳ್ಳುವ ಯತ್ನಕ್ಕೆ ಕೈಹಾಕಿದೆ ಎಂದರು.
ಯಾವಾಗಲೂ ನಾನೇ ಖುಷಿಯಾಗಿರಬೇಕು ಎಂಬುವುದು ತಪ್ಪು. ಒಂದು ತಿಂಗಳ ಕಾಲ ನನಗೆ ಸಂಕಷ್ಟ ನೀಡಿದ ಭಗವಂತ, ನನ್ನ ರಾಜಕೀಯ ವಿರೋಧಿಗಳಿಗೂ ಕೆಲಕಾಲ ಖುಷಿಯಿಂದ ಇರುವಂತೆ, ಹಗಲುಗನಸು ಕಾಣುವಂತೆ ಖುಷಿ ನೀಡಿದ್ದ. ಮತ್ತೆ ನನಗೆ ಭಗವಂತನ ಶ್ರೀರಕ್ಷೆ ಸಿಕ್ಕಿದ್ದು, ಸಿಬಿಐ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆಯಾಗಿದೆ. ಈ ಮೂಲಕ ಉಪ ಚುನಾವಣೆಯ ಕನಸು ಕಾಣುತ್ತಿದ್ದ ಮತ್ತು ಈಗಾಗಲೇ ಬಿಳಿ ಬಟ್ಟೆ ಹೊಲಿಸಿಕೊಂಡಿದ್ದ ನನ್ನ ರಾಜಕೀಯ ವಿರೋಧಿಗಳಿಗೆ ದೇವರು ನಿರಾಸೆ ಮೂಡಿಸಿದ್ದಾನೆ ಎಂದು ವ್ಯಂಗ್ಯವಾಡಿದರು.
Laxmi News 24×7