ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪ್ರಮುಖವಾಗಿ ಪಡಿತರ ಚೀಟಿಯೂ ಒಂದು.
ರೇಷನ್ ಕಾರ್ಡ್ ಇದ್ದರೆ ಆಯಾ ಕಾರ್ಡ್ಗಳನ್ನು ಅನುಸರಿಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಅಕ್ಕಿ, ಬೇಳೆ, ಗೋಧಿ, ಸಕ್ಕರೆ ಸೇರಿ ಹಲವು ಆಹಾರ ಪದಾರ್ಥಗಳು ದೊರೆಯುತ್ತದೆ. ಬಿಪಿಎಲ್ ಕಾರ್ಡ್ದಾರರ ಕುಟುಂಬಕ್ಕೆ ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಆಹಾರ ಪದಾರ್ಥಿಗಳು ಉಚಿತವಾಗಿ ದೊರೆತರೆ, ಎಪಿಎಲ್ ಕಾರ್ಡ್ದಾರರಿಗೆ ಸರ್ಕಾರ ನಿಗದಿಪಡಿಸಿದ ಕಡಿಮೆ ದರದಲ್ಲಿ ಪಡಿತರ ಸಿಗುತ್ತದೆ. ಇದರಿಂದ ಹಲವಾರು ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ಇಷ್ಟೇ ಅಲ್ಲದೆ, ರೇಷನ್ ಕಾರ್ಡ್ ಇದ್ದರೆ ಇನ್ನೂ ಹಲವು ಸೌಲಭ್ಯಗಳು ಸರ್ಕಾರದಿಂದ ಉಚಿತವಾಗಿ ಸಿಗುತ್ತವೆ. ಅದೆಷ್ಟೋ ಜನರಿಗೆ ಇದರ ಸರಿಯಾದ ಮಾಹಿತಿ ಇರುವುದಿಲ್ಲ.
ಕಾರ್ಡ್ ಇದ್ದರೆ ಗ್ಯಾಸ್ ಸಿಲಿಂಡರ್, ಆರೋಗ್ಯ ವಿಮೆ, ಶಿಕ್ಷಣಕ್ಕೆ ಆರ್ಥಿಕ ನೆರವು, ಉಚಿತ ಹೊಲಿಗೆ ಯಂತ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸರ್ಕಾರದಿಂದ ಯಾವೆಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬುದರ ಮಾಹಿತಿ ಇಲ್ಲಿದೆ.
ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು: ಒಂದು ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ರೇಷನ್ ಕಾರ್ಡ್ ತೋರಿಸುತ್ತಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ನೆರವು ಯೋಜನೆಗಳಲ್ಲಿ ಅರ್ಹತೆ ರೂಪದಲ್ಲಿ ರೇಷನ್ ಕಾರ್ಡ್ ಬಳಕೆ ಮಾಡಬಹುದು. ಶುಲ್ಕ ಮನ್ನಾ ಹಾಗೂ ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯ ದೊರೆಯುತ್ತದೆ. ಅಷ್ಟೇ ಅಲ್ಲದೆ, ವ್ಯಕ್ತಿಯ ಹೆಸರು, ವಯಸ್ಸು ಮತ್ತು ವಿಳಾಸ, ಕುಟುಂಬದ ವಿವರಗಳನ್ನು ಒಳಗೊಂಡಿರುವ ಕಾರಣ ರೇಷನ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿಯಾಗಿಯೂ ಬಳಸಬಹುದು. ಮತದಾನ ಮತ್ತಿತರ ಕಡೆ ಐಡಿ ಪ್ರೂಪ್ ಆಗಿ ಈ ಕಾರ್ಡ್ ಬಳಕೆ ಮಾಡಬಹುದು. ಕೆಲವು ಪಿಂಚಣಿ ಯೋಜನೆಗಳಿಗೆ ಅಥವಾ ಬ್ಯಾಂಕ್ನಲ್ಲಿ ಖಾತೆ ತೆರೆಯಲು ಸಹ ಪಡಿತರ ಚೀಟಿ ಬಳಸಬಹುದಾಗಿದೆ.
ಉಜ್ವಲ ಗ್ಯಾಸ್ ಸಿಲಿಂಡರ್ : ಅಡುಗೆ ಗ್ಯಾಸ್ ಇಲ್ಲದವರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಸಿಗುತ್ತದೆ. ರೇಷನ್ ಕಾರ್ಡ್ ಬಳಸಿಕೊಂಡು ಈ ಯೋಜನೆ ಪಡೆಯುಬಹುದಾಗಿದೆ.
ಶ್ರಮಿಕ್ ಕಾರ್ಡ್ : ಅಸಂಘಟಿತ ವಲಯದ ಕಾರ್ಮಿಕರಿಗೆ ಶ್ರಮಿಕ್ ಕಾರ್ಡ್ ಯೋಜನೆಯಡಿ ರೇಷನ್ ಕಾರ್ಡ್ ಆಧಾರವಾಗಿ ಕೆಲಸದ ಲಾಭ, ಉದ್ಯೋಗ ಅವಕಾಶ ಸೇರಿದಂತೆ ಹಲವು ನೆರವು ದೊರೆಯುತ್ತದೆ. ಆ ಮೂಲಕ ಕಾರ್ಮಿಕರು ಕಾನೂನುಬದ್ಧವಾಗಿ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದು ಎನ್ನುತ್ತಾರೆ ಅಧಿಕಾರಿಗಳು.
Laxmi News 24×7