ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಪುಟ್ಟ ಕಂದಮ್ಮನ ಮೇಲಿನ ಅತ್ಯಾಚಾರ ಯತ್ನ ಮತ್ತು ಕೊಲೆ ದುಷ್ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
“ಈ ಘಟನೆಯ ಬಗ್ಗೆ ಕೇಳಿ ಮೈಯಲ್ಲ ಜುಮ್ ಅಂದಿದೆ. ನಾಲ್ಕು ವರ್ಷದ ಮಗುರೀ ಅದು. ಆ ಸಿಸಿಟಿವಿ ವಿಡಿಯೋ ನೋಡಲು ಆಗಲಿಲ್ಲ” ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಘಟನೆಯನ್ನು ಖಂಡಿಸಿದರು.”ಅಪರಾಧಿಗೆ ಕಾನೂನಿನಡಿ ಸರಿಯಾದ ಶಿಕ್ಷೆಯಾಗಬೇಕು. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳುವಂತೆ ಆಗಬಾರದು. ಕಾಯುತ್ತಾ ಕುಳಿತಂತೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ನ್ಯಾಯಾಲಯವೂ ಸರಿಯಾದ ಕ್ರಮ ತೆಗೆದುಕೊಳ್ಳಬೇಕು” ಎಂದು ಸಚಿವರು ಒತ್ತಾಯಿಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದ್ದು, “ಬಾಲಕಿಯ ಕೊಲೆ, ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆತನ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಬೇಕಿದೆ” ಎಂದು ಹೇಳಿದರು.
“ಇದರಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲ ಕಡೆ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೆಡೆ ಕಿಡಿಗೇಡಿಗಳು ಇಂತಹ ಕೆಲಸ ಮಾಡುತ್ತಿರುತ್ತಾರೆ. ಈ ಘಟನೆಗಳು ಮರುಕಳಿಸಬಾರದು” ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, “ಘಟನೆಯ ಬಗ್ಗೆ ಈಗ ಗಮನಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆಯ ಬಗ್ಗೆ ಸರ್ಕಾರ ಗಂಭೀರವಾಗಿ ನೋಡಬೇಕು. ಇದರಲ್ಲಿ ರಾಜಕೀಯವಾಗಿ ಏನೂ ಮಾತನಾಡಲಾರೆ” ಎಂದು ಹೇಳಿದರು.
Laxmi News 24×7