ಬೆಳಗಾವಿ: “ಬೆಳಗಾವಿಯಲ್ಲಿ ನಾಳೆ ರಾಜ್ಯದಲ್ಲೇ ಪ್ರಥಮ ಬಾರಿಗೆ 3 ಸಾವಿರ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತವರು ಮನೆಯಲ್ಲಿ ಸಿಗುವ ಆತಿಥ್ಯದಂತೆ ಗರ್ಭಿಣಿಯರಿಗೆ ಉಡಿ ತುಂಬಿ, ಹೋಳಿಗೆ ಊಟ ಹಾಕುತ್ತಿದ್ದೇವೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಇಂದು ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಗರದ ಸಿಪಿಇಡ್ ಮೈದಾನದಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಸುಮಾರು 100 ಜನರಿಗೆ ತ್ರಿಚಕ್ರ ವಾಹನ, ಅಂಧ ಮಕ್ಕಳಿಗೆ ಬ್ರೇಲ್ ಲ್ಯಾಪಟಾಪ್ ವಿತರಣೆ ಸೇರಿ ಮತ್ತಿತರ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 3 ತಿಂಗಳ ಗರ್ಭಿಣಿಯಿಂದ ಹಿಡಿದು 100 ವರ್ಷದ ಮನುಷ್ಯನ ಬದುಕು ಕಟ್ಟುವ ಸೇವೆಯನ್ನು ನಮ್ಮ ಇಲಾಖೆ ಮಾಡುತ್ತಿದೆ” ಎಂದರು.
ಹುಟ್ಟುವ ಮಗು ಮತ್ತು ತಾಯಿ ಆರೋಗ್ಯಪೂರ್ಣವಾಗಿರಲಿ. ತಾಯಿಯ ಮಾನಸಿಕ ವಿಕಸಿತವಾಗಲಿ, ಒಂದು ದಿನ ನಮ್ಮ ಇಲಾಖೆ ಜೊತೆ ಸಂತೋಷದಿಂದ ಕಳೆಯಲಿ ಎಂಬುದು ನಮ್ಮ ಉದ್ದೇಶ. ಐದು ಜಿಲ್ಲೆಗಳ ಸ್ತ್ರೀ ಶಕ್ತಿ ಸಂಘಗಳ ವಸ್ತು ಪ್ರದರ್ಶನ ಕೂಡ ನಡೆಯಲಿದೆ. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೂ ಸನ್ಮಾನ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.
“ಬಹಳ ಬಿಸಿಲು ಇರುವ ಹಿನ್ನೆಲೆಯಲ್ಲಿ ಜರ್ಮನಿ ಟೆಂಟ್ ಹಾಕಿದ್ದೇವೆ. ನೀರು, ಬಿಸ್ಕಟ್, ಗ್ಲುಕೋಸ್ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಗರ್ಭಿಣಿಯರನ್ನು ಕರೆದುಕೊಂಡು ಬರುವುದು ಮತ್ತು ವಾಪಸ್ ಮನೆಗೆ ಮುಟ್ಟಿಸುವ ಜವಾಬ್ದಾರಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಿದ್ದೇವೆ. ಪ್ರಾಯೋಗಿಕವಾಗಿ ನನ್ನ ಕ್ಷೇತ್ರದಿಂದಲೇ ವಿನೂತನ ಕಾರ್ಯಕ್ರಮ ಆರಂಭಿಸಿದ್ದೇವೆ. 26ರಂದು ಬಳ್ಳಾರಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರಾಯೋಗಿಕವಾಗಿ ಇದು ಮೊದಲ ಪ್ರಯತ್ನವಾಗಿದ್ದು, ಇದರ ಯಶಸ್ಸು ನೋಡಿಕೊಂಡು ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಆಯೋಜಿಸಲಿದ್ದೇವೆ” ಎಂದು ಹೆಬ್ಬಾಳ್ಕರ್ ತಿಳಿಸಿದರು.
ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ನಾಯಕರು ಬರ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, “ನಾನು ಮತ್ತು ಸತೀಶ್ ಜಾರಕಿಹೊಳಿ ಅವರು ರಾಜ್ಯಮಟ್ಟದ ನಾಯಕರೇ ಆಗಿದ್ದೇವೆ” ಎಂದು ಸಮರ್ಥಿಸಿಕೊಂಡರು.
Laxmi News 24×7