ಗೋಕಾಕ: ಕುಟುಂಬ ವಿಷಯದಲ್ಲಿ ಜಾರಕಿಹೊಳಿ ಸಹೋದರರು ಎಲ್ಲರು ಒಂದೇ, ರಾಜಕೀಯವಾಗಿ ಮಾತ್ರ ನಾವು ಬೇರೆ ಬೇರೆ ಅಂತಾಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಇನ್ಮುಂದೆ ಲಾಕ್ ಡೌನ್ ಮಾಡುವುದು ಬಿಡುವುದನ್ನು ಸಿಎಂ ನಿರ್ಧರಿಸುತ್ತಾರೆ, ಜನರು ಕೊರೊನಾ ಹೆದರುವ ಅವಶ್ಯಕತೆ ಇಲ್ಲ. ಜಾಗೃತರಾಗಬೇಕಷ್ಟೇ, ಜನರು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ್ರೆ ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಬಹುದು ಎಂದರು.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷದ ಮುಖಂಡರು ಚರ್ಚೆ ನಡಿಸಿ ಜನರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು 11 ಕೆವಿ, ಭೂಗತ ವಿದ್ಯೂತ್ ಕೇಬಲ್ ಕಾಮಗಾರಿ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಸಚಿವರು, ಭೂತಗ ವಿದ್ಯೂತ್ ಕಾಮಗಾರಿ ಹಲವು ಬಾರಿ ನೆನೆಗುದಿಗೆ ಬಿದ್ದಿತ್ತು. ನಾನು ಮತ್ತು ಉಮೇಶ ಕತ್ತಿ ಪರಿಶ್ರಮದಿಂದ ಕಾಮಗಾರಿಗೆ ಚಾಲನೆ ದೊರೆತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರು ಈ ಕಾಮಗಾರಿಗೆ ಸಹಕಾರ ನೀಡಿದ್ದಾರೆ. ಅವರಿಗೂ ಸಹ ನಾನು ಗೋಕಾಕವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ದೈಹಿಕ ಅಂತರ ಮರೆತ ಸಚಿವರು:
ಜನರಿಗೆ ಅರಿವು ಮೂಡಿಸಬೇಕಾದ ಸಚಿವರೇ ಅಭಿವೃದ್ದಿ ಕಾಮಗಾರಿಗೆ ಚಾಲನೆ ವೇಳೆ ದೈಹಿಕ ಅಂತರ ಮರೆತು ವಿವಿಧ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಹ ಜತೆಗಿದ್ರು. ಸಾಕಷ್ಟು ಜನರು ಗುಂಪು ಗುಂಪಾಗಿ ನಿಂತಿರುವ ದೃಶ್ಯ ಕಂಡು ಬಂದವು.