ಚಾಮರಾಜನಗರ: ಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಜಗಿದು ಹಸುವಿನ ಬಾಯಿ ಛಿದ್ರವಾದ ದಾರುಣ ಘಟನೆ ಹನೂರು ತಾಲೂಕಿನ ಬೂದಬಾಳು ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಮೇವು ಮೇಯುತಿದ್ದಾಗ ಈ ಘಟನೆ ನಡೆದಿದೆ.
ಮಲ್ಲಯ್ಯ ಎಂಬವರ ಹಸು ಇದಾಗಿದ್ದು, ಅದರ ಮೂಕ ರೋದನೆ ಮನಕಲಕುವಂತಿತ್ತು. ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಬಳಿ ಜಾನುವಾರುಗಳು ಮೇವು ಮೇಯಲು ತೆರಳುತ್ತಿದ್ದ ವೇಳೆ ಕಾಡುಹಂದಿ ಬೇಟೆಗೆ ಅಡಗಿಸಿಟ್ಟಿದ್ದ ಸಿಡಿಮದ್ದು ಜಗಿದು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಹಸುವಿನ ಮುಖ ಛಿದ್ರವಾಗಿದೆ ಎಂದು ಮಾಲೀಕ ಮಲ್ಲಯ್ಯ ನೋವು ತೋಡಿಕೊಂಡಿದ್ದಾನೆ.ಕಳೆದೊಂದು ತಿಂಗಳಲ್ಲಿ ಜಿಲ್ಲೆಯ ಕೊಳ್ಳೇಗಾಲ,
ಕುದೇರು, ರಾಮಪುರ, ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಬೇಟೆಗೆ ಸಿಡಿಮದ್ದು ಇಟ್ಟು ಜಾನುವಾರುಗಳ ಸಾವಿಗೆ ಕಾರಣರಾಗಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನಿನಡಿ ಸೂಕ್ತ ಕ್ರಮ ವಹಿಸುವಂತೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ಹಾಗೂ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಅವರು ಪ್ರತ್ಯೇಕ ತಂಡ ರಚನೆ ಮಾಡಿ ಫೆ. 25ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಘಟನೆ ನಡೆದ 10 ದಿನಗಳ ನಂತರ ಬೂದುಬಾಳು ಗ್ರಾಮದಲ್ಲಿ ಮತ್ತೇ ಸಿಡಿಮದ್ದು ಸಿಡಿದಿದೆ. ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7