ಧಾರವಾಡ, ಫೆಬ್ರವರಿ 19: ಕಿರುಕುಳ ತಪ್ಪಿಸಬೇಕು ಮತ್ತು ಸಾವಿನ ಸರಣಿ ನಿಲ್ಲಬೇಕು ಅಂತಾ ಸರ್ಕಾರ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ ತಂದಿದೆ. ಆದರೆ ಫೈನಾನ್ಸ್ (Microfinance) ಅಟ್ಟಹಾಸ ಮಾತ್ರ ನಿಲ್ಲುತ್ತಿಲ್ಲ. ಕರ್ನಾಟಕದಲ್ಲಿ ಮತ್ತೆ ಸಾವುಗಳು ಸಂಭವಿಸುತ್ತಲ್ಲೇ ಇದ್ದಾವೆ. ಇದೀಗ ಸಾಲಗಾರನ ಕಿರುಕುಳದಿಂದಾಗಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಉಣಕಲ್ಕೆರೆಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉಣಕಲ್ ಕೆರೆಗೆ ಹಾರಿ ಯಲಿವಾಳ ಗ್ರಾಮದ ನಿವಾಸಿ ಶಿವಾನಂದ ಕಳ್ಳಿಮನಿ (36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ತಿಕ್ ಬಳ್ಳಾರಿ ಎಂಬುವರ ಬಳಿ 4 ಲಕ್ಷ ರೂ. ಸಾಲ ಪಡೆದಿದ್ದ ಶಿವಾನಂದ, ಬಳಿಕ 4 ಲಕ್ಷಕ್ಕೆ 4 ಲಕ್ಷ ರೂ. ಸಾಲ ಕಟ್ಟಿದ್ದರು. ಸಾಲ ತೀರಿಸಿದರೂ ಕಿರುಕುಳ ನೀಡಿದ್ದಾರೆ.
ಸಾಲಗಾರನ ಕಿರುಕುಳದ ಬಗ್ಗೆ ಮೃತ ಶಿವಾನಂದ ಡೆತ್ನೋಟ್ ಬರೆದಿಟ್ಟಿದ್ದಾರೆ. ಸದ್ಯ ಶಿವಾನಂದ ಮೃತದೇಹ ಹುಬ್ಬಳ್ಳಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಮಿಷನರ್ ಕಾಲಿಗೆ ಬಿದ್ದ ಶಿವಾನಂದ ಚಿಕ್ಕಮ್ಮ
ಕಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಹುಬ್ಬಳ್ಳಿ-ಧಾರವಾಡ ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ಮೃತ ಶಿವಾನಂದ ಚಿಕ್ಕಮ್ಮ ಸರಸ್ವತಿ ಕಮಿಷನರ್ ಕಾಲಿಗೆ ಬಿದಿದ್ದು, ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಅಳಲು ತೊಡಿಕೊಂಡಿದ್ದಾರೆ. ಕಿರುಕುಳ ನೀಡಿ ನನ್ನ ಮಗನ ಸಾವಿಗೆ ಕಾರಣರಾದವರ ಮೇಲೆ ಕ್ರಮಕ್ಕೆ ಮನವಿ ಮಾಡಲಾಗಿದ್ದು, ಆರೋಪಿಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಭರವಸೆ ನೀಡಿದ್ದಾರೆ.
ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಿಷ್ಟು
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾನಗರ ವ್ಯಾಪ್ತಿಯಲ್ಲಿ ಇಂದು ಒಂದು ಪ್ರಕರಣ ದಾಖಲಾಗಿದೆ. ಉಣಕಲ್ ಕೆರೆಯಲ್ಲಿ ಒಂದು ಮೃತ ದೇಹ ಸಿಕ್ಕಿದೆ. ಮೇಲ್ನೋಟಕ್ಕೆ ಮೂರು ದಿನಗಳ ಹಿಂದೆ ನೀರಿಲ್ಲಿ ಬಿದ್ದಿರುವುದು ಗೊತ್ತಾಗಿದೆ. 36 ವಯಸ್ಸಿನ ಶಿವಾನಂದ ಬಸವಣ್ಣಪ್ಪ ಕಳ್ಳಿಮನಿ ಅಂತ ಗುರುತಿಸಲಾಗಿದೆ. ಕುಂದಗೋಳ ತಾಲೂಕು ಯಲಿವಾಳ ಗ್ರಾಮದವನು ಎಂದಿದ್ದಾರೆ.
ಈತನ ಪರಿಚಯಸ್ಥನ ಬಳಿ ನಾಲ್ಕು ಲಕ್ಷ ರೂ. ಹಣ ಪಡೆದು ಅಸಲು ಬಡ್ಡಿ ಸಮೇತ ಕೊಟ್ಟರು ಕಿರುಕುಳ ಮಾಡಲಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.ಹಾವೇರಿ ಜಿಲ್ಲೆಯ ಗುತ್ತಲದಲ್ಲಿ ಬೈಕ್ ಹಾಗೂ ಡೆತ್ನೋಟ್ ಸಿಕ್ಕಿದೆ. ಇದೇ ತಿಂಗಳ 12ರಂದು ಮನೆ ಬಿಟ್ಟು ಹೊರಗಡೆ ಹೋಗಿರುತ್ತಾನೆ. ದಿನಾಂಕ 14ರಂದು ಮಿಸ್ಸಿಂಗ್ ಅಂತ ಕುಂದಗೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತೆ. ಇದು ಮೈಕ್ರೋ ಫೈನಾನ್ಸ್ ಅಲ್ಲ ಕೈಗಡ ಸಾಲ. ಆರೋಪಿಯನ್ನ ವಶಕ್ಕೆ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.
Laxmi News 24×7