ಧಾರವಾಡ: ಉತ್ತರ ಕರ್ನಾಟಕ ಭಾಗದ ಸುಪ್ರಸಿದ್ಧ ಮುರುಘಾಮಠದ ಜಾತ್ರಾ ಮಹೋತ್ಸವದ ನಿಮಿತ್ತ ಧಾರವಾಡದಲ್ಲಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಭಾಗದಿಂದ ಎತ್ತುಗಳನ್ನು ತಂದಿದ್ದ ರೈತರು ಸ್ಪರ್ಧೆಯಲ್ಲಿ ಅವುಗಳ ಶಕ್ತಿ ಪ್ರದರ್ಶನ ಮಾಡಿದರು.
ಧಾರವಾಡ ಹೊರವಲಯದ ಸವದತ್ತಿ ರಸ್ತೆಯ ಕಾಶಿ ನಗರದ ಜಮೀನಿನಲ್ಲಿ ಮುರುಘಾಮಠದ ಶ್ರೀ ಮದಥಣಿ ಮುರುಘರಾಜೇಂದ್ರ ಮಹಾಸ್ವಾಮಿಗಳ 95ನೇ ಜಾತ್ರಾ ಮಹೋತ್ಸವದ ನಿಮಿತ್ತ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಈ ಸ್ಪರ್ಧೆ ಆಯೋಜಿಸಿದ್ದು, ರಾಜ್ಯಮಟ್ಟದ ಸ್ಪರ್ಧೆ ಇದ್ದುದರಿಂದ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ರೈತರು ತಮ್ಮ ಓಟದ ಎತ್ತುಗಳ ಮೂಲಕ ಆಗಮಿಸಿ ಭಾಗಿಯಾಗಿದ್ದರು.
ಒಂದು ನಿಮಿಷದ ಅವಧಿಯಲ್ಲಿ ಯಾವ ಜೋಡೆತ್ತುಗಳು ಹೆಚ್ಚು ದೂರ ಓಡುತ್ತವೋ ಆ ಜೋಡಿಗೆ ಇಲ್ಲಿ ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಗಾಗಿ ಖಾಲಿ ಜಮೀನನ್ನು ಸ್ವಚ್ಛಗೊಳಿಸಿ, ಓಟದ ಪಥ ನಿರ್ಮಿಸಲಾಗುತ್ತದೆ. ಈ ಚಕ್ಕಡಿಯಲ್ಲಿ ಓರ್ವ ರೈತ ಹಾಗೂ ಮತ್ತೋರ್ವ ನಿರ್ಣಾಯಕರು ಕುಳಿತಿರುತ್ತಾರೆ.ನಿರ್ಣಾಯಕರು ಸೀಟಿ ಹೊಡೆಯುತ್ತಿದ್ದಂತೆಯೇ ಸ್ಪರ್ಧೆ ಶುರುವಾಗುತ್ತದೆ.
ಒಂದು ನಿಮಿಷದಲ್ಲಿ ಮುಕ್ತಾಯವಾಗುತ್ತದೆ. ಪುನಃ ಸೀಟಿ ಹೊಡೆದಾಗ, ಅಲ್ಲಿಯವರೆಗೆ ಎತ್ತುಗಳು ಓಡಿರೋ ದೂರವನ್ನು ಆಧರಿಸಿ, ವಿಜೇತ ಎತ್ತುಗಳನ್ನು ಗುರುತಿಸಲಾಗುತ್ತದೆ.
Laxmi News 24×7