Breaking News

ಮಾಜಿ ಸಂಸದರ ಸಹೋದರಿಯೆಂದು ನಂಬಿಸಿ ಚಿನ್ನದಂಗಡಿ ಮಾಲೀಕರಿಗೆ ವಂಚನೆ ಆರೋಪ: ನಟ ಸೇರಿ ಮೂವರ ವಿರುದ್ಧ ಪ್ರಕರಣ

Spread the love

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ನಂಬಿಸಿ ಚಿನ್ನದ ವ್ಯಾಪಾರಿಯೊಬ್ಬರಿಗೆ 9.82 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲೀಕರಾದ ವನಿತಾ ಎಸ್.ಐತಾಳ್ ಅವರು ನೀಡಿರುವ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆ.ಎನ್ ಹಾಗೂ ನಟ ಧರ್ಮೇಂದ್ರ‌ ಬಿ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆರೋಪವೇನು?: ತಾನು ಮಾಜಿ ಸಂಸದರ ಸಹೋದರಿ, ಅನೇಕ ರಾಜಕೀಯ ನಾಯಕರ ಪರಿಚಯವಿದೆ ಎಂದು ವನಿತಾ ಅವರಿಗೆ ಐಶ್ವರ್ಯಾ ಗೌಡ, ಹಾಗೂ ಆಕೆಯ ಪತಿ ಹರೀಶ್ ನಂಬಿಸಿದ್ದಾರೆ. ನಂತರ ಸಾಲದ ರೂಪದಲ್ಲಿ ಚಿನ್ನ ಪಡೆದು ಆರಂಭದಲ್ಲಿ ಕೆಲ ಬಾರಿ ಹಣ ನೀಡಿದ್ದಾರೆ. ಆದರೆ 2023 ಅಕ್ಟೋಬರ್‌ನಿಂದ 2024 ಏಪ್ರಿಲ್‌ವರೆಗೆ ಹಂತ ಹಂತವಾಗಿ ಪಡೆದಿದ್ದ ಒಟ್ಟು 14 ಕೆ.ಜಿ 660 ಗ್ರಾಂ ಚಿನ್ನಕ್ಕೆ ಪ್ರತಿಯಾಗಿ ಹಣ ನೀಡಿಲ್ಲ. ಹಣ ಕೇಳಿದಾಗ ಸದ್ಯಕ್ಕೆ ಹಣವಿಲ್ಲ ಎಂದಿದ್ದ ಆರೋಪಿಗಳು 2024ರ ಜುಲೈವರೆಗೂ ಸಮಯಾವಕಾಶ ಕೇಳಿದ್ದಾರೆ. ಹಾಗೂ ಪಡೆದಿದ್ದ ಚಿನ್ನಕ್ಕೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.

ಕಾಲಾವಕಾಶ ಮುಗಿದ ಬಳಿಕ ಹಣ ವಾಪಾಸ್ ಕೇಳಿದಾಗ, ಧರ್ಮೇಂದ್ರ ಮೂಲಕ ಕರೆ ಮಾಡಿಸಿ ಸಂಸದರ ಧ್ವನಿಯಲ್ಲಿ ಮಾತನಾಡಿಸಿದ್ದಾರೆ. ಈ ವಿಷಯ ತಿಳಿದ ಬಳಿಕ ಐಶ್ವರ್ಯಾಗೆ ಕರೆ ಮಾಡಿ ಪಡೆದಿದ್ದ ಚಿನ್ನಕ್ಕೆ ಪ್ರತಿಯಾಗಿ ಹಣ ನೀಡುವಂತೆ ಕೇಳಿದಾಗ, ಹಣ ಕೇಳಿದರೆ ಧರ್ಮೇಂದ್ರನನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಧರ್ಮೇಂದ್ರ ಅವರನ್ನು ಅಂಗಡಿಗೆ ಕಳುಹಿಸಿ ಬೆದರಿಸಿದ್ದಾರೆ ಎಂದು ವನಿತಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ನಾವು ಮುಂಬೈ, ಬೆಂಗಳೂರಿನ ವಿವಿಧ ಚಿನ್ನದ ವ್ಯಾಪಾರಿಗಳಿಂದ ಚಿನ್ನಾಭರಣ ಪಡೆದು ಆರೋಪಿಗಳಿಗೆ ನೀಡಿದ್ದೆವು. ಆದರೆ, ಆರೋಪಿಗಳು ಇನ್ನೂ ಹಣ ನೀಡದಿರುವುದರಿಂದ ನಮಗೆ ದೈನಂದಿನ ವ್ಯವಹಾರ ನಡೆಸುವುದು ಕಷ್ಟವಾಗಿದೆ ಎಂದು ಚಂದ್ರಾಲೇಔಟ್ ಠಾಣೆಗೆ ವನಿತಾ ಅವರು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಚೈನೀಸ್ ಫುಡ್ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ್ ಬಳಕೆ ವಿರುದ್ಧ ಧ್ವನಿ ಸಂಘಟನೆ ಆಕ್ರೋಶ

Spread the loveವಿಷಕಾರಿ ರಾಸಾಯನಿಕ ಬಳಕೆ ನಿಲ್ಲಿಸುವಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ಹುಕ್ಕೇರಿ ಪಟ್ಟಣದ ಚೈನೀಸ್ ಫುಡ್ ಅಂಗಡಿಗಳಲ್ಲಿ ಟೆಸ್ಟಿಂಗ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ