ಅಳ್ನಾವರ: ಮಲೆನಾಡಿನ ಸೆರಗಿನ ಈ ಭಾಗದಲ್ಲಿ ಮಳೆ ವಿರಮಿಸಿದ್ದು, ಮುಖ್ಯ ಬೆಳೆಗಳಾದ ಕಬ್ಬು, ಭತ್ತ ಕಟಾವು ಕಾರ್ಯ ಚುರುಕುಗೊಂಡಿದೆ. ಹಲವೆಡೆ ಬೆಳೆದ ಗೋವಿನಜೋಳ ಕಟಾವು ಮುಕ್ತಾಯದ ಹಂತದಲ್ಲಿದೆ. ತಾಲೂಕಿನಾದ್ಯಂತ ಹೊಲಗಳಲ್ಲಿ ಕಾರ್ಮಿಕರು ಒಕ್ಕಲು ಮಾಡುವ ನೋಟ ಎಲ್ಲೆಡೆ ಕಂಡುಬರುತ್ತಿದೆ.
ತಾಲ್ಲೂಕಿನಲ್ಲಿ ಸುಮಾರು 1,895 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಹಾಗೂ 1,740 ಹೆಕ್ಟೇರ್ ಭತ್ತ, 1,920 ಹೆಕ್ಟೇರ್ ಗೋವಿನಜೋಳ ಬೆಳೆಯಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿವೆ.
ಹೊರ ರಾಜ್ಯದ ಕಾರ್ಮಿಕರು: ‘ಪ್ರತಿ ವರ್ಷ ಈ ಭಾಗದ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸದ್ಯ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದ್ದು, ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರು ಬಂದಿದ್ದಾರೆ’ ಎಂದು ಕಾಶೇನಟ್ಟಿ ರೈತ ರಾಯಪ್ಪ ಹುಡೇದ ತಿಳಿಸಿದರು.
ಬಿಹಾರದಲ್ಲಿ ಗೋಧಿ ಮುಂತಾದ ಪೈರು ಕಟಾವು ಮಾಡುವ ಕಾರ್ಮಿಕರು ಇಲ್ಲಿ ಕಬ್ಬು ಕಟಾವಿಗೆ ಬಂದಿದ್ದು, ಈ ಕಾರ್ಯಕ್ಕಾಗಿ ತಮ್ಮದೇ ವಿಶೇಷ ಆಯುಧ ಬಳಕೆ ಮಾಡುತ್ತಿರುವುದಾಗಿ ಕಾರ್ಮಿಕ ಅಶೋಕಕುಮಾರ ಹೇಳಿದರು.
ಬಿಹಾರ ಮೂಲದವರು ಈ ಭಾಗದಲ್ಲಿ ಕಟ್ಟಿಗೆ ಪೀಠೋಪಕರಣ ತಯಾರಿಕೆ, ಹೊಸ ಮನೆ ಕಟ್ಟಲು ಟೈಲ್ಸ್ ಕೂಡಿಸುವುದು ಮುಂತಾದ ಕಾರ್ಯಗಳಿಗೆ ಬರುತ್ತಿದ್ದರು. ಸದ್ಯ ಕೃಷಿ ಕ್ಷೇತ್ರಕ್ಕೂ ಅವರು ಲಗ್ಗೆ ಇಟ್ಟಿದ್ದು, ಎರಡರಿಂದ ಮೂರು ತಿಂಗಳು ಕೈತುಂಬ ಕೆಲಸ ಇದೆ.
‘ಅಳ್ನಾವರ ಭಾಗದಲ್ಲಿ ಸ್ಥಳೀಯ ಕೃಷಿ ಕಾರ್ಮಿಕರ ಕೊರತೆ ಸದಾ ಕಾಡುತ್ತಿದೆ. ಬಿಹಾರದಿಂದ ಕಾರ್ಮಿಕರು ಬಂದಿದ್ದರಿಂದ ನಮ್ಮ ಕಬ್ಬು ಬೇಗ ರವಾನೆ ಆಗುತ್ತಿದೆ’ ಎಂದು ಬೆಣಚಿ ಗ್ರಾಮದ ರೈತ ಕೃಷ್ಣ ಗೌಡಪ್ಪನವರ ಹೇಳಿದರು.
Laxmi News 24×7