ದೀಪಾವಳಿ ಹಬ್ಬ ಬರುತ್ತಿದ್ದಂತೆ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ಪಗಡೆ ಆಟ ಆಡುವುದಕ್ಕೆ ಸಜ್ಜಾಗುತ್ತಾರೆ. ದೀಪಾವಳಿಗೆ ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಪಗಡೆ ಆಟದ ಸಂಭ್ರಮ ತುಂಬಿಕೊಳ್ಳುತ್ತದೆ. ಕೈಯಲ್ಲಿ ಪಗಡೆ ಹಾಸು, ಕವಡೆ ಕಾಯಿಗಳನ್ನು ಹಿಡಿದುಕೊಂಡು ಗ್ರಾಮದ ಅಗಸಿ ಕಟ್ಟೆ, ಪಂಚಾಯಿತಿ ಕಟ್ಟೆ, ದೇವಸ್ಥಾನದ ಕಟ್ಟೆಗೋ ಹೊರಟರೆಂದರೆ ದೀಪಾವಳಿ ಮೈದುಂಬಿಕೊಂಡಿದೆ ಎಂದರ್ಥ.
ದೀಪಾವಳಿಯ ಸುತ್ತ ಐದು ದಿನಗಳ ವರೆಗೆ ಪಗಡೆ ಆಟದ ರಂಗು ಏರುತ್ತದೆ. ಊರುಗಳಲ್ಲಿ ಆಕಾಶಬುಟ್ಟಿ ಮತ್ತು ಹಣತೆಗಳ ಬೆಳಕಿನ ಸಂಭ್ರಮ ಒಂದೆಡೆಯಾದರೆ ದೀಪದ ಬೆಳಕಿನ ಅಡಿಯಲ್ಲಿ ಪಗಡೆ ಆಡುವವರ ಸಂಭ್ರಮ ಇನ್ನೊಂದೆಡೆ ಇರುತ್ತದೆ. ಮೂಡಲಗಿ ತಾಲ್ಲೂಕಿನಲ್ಲಿ ಪ್ರಮುಖವಾಗಿ ಕುಲಗೋಡ, ಯಾದವಾಡ, ಮಸಗುಪ್ಪಿ, ಅವರಾದಿ, ಕಮಲದಿನ್ನಿ, ಶಿವಾಪುರ, ಢವಳೇಶ್ವರ, ಹುಣ್ಯಶಾಳ ಪಿವೈ, ಖಾನಟ್ಟಿ, ಫುಲಗಡ್ಡಿ, ವೆಂಕಟಾಪುರ, ಬೀಸನಕೊಪ್ಪ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ದಿನಗಳ ರಾತ್ರಿ ಪಗಡೆ ಆಟದ ಸಂಭ್ರಮದ ಜೋರಾಗಿರುತ್ತದೆ.
ಪೌರಾಣಿಕ ಕಥೆ: ಮಹಾಭಾರತದಲ್ಲಿ ಕೌರವರು ಪಾಂಡವರನ್ನು ಪಗಡೆ ಆಟದಲ್ಲಿ ಸೋಲಿಸಿ ಅವರ ಸರ್ವಸ್ವವನ್ನು ಕಿತ್ತುಕೊಂಡು ಅರಣ್ಯಕ್ಕೆ ಸಾಗಹಾಕುವರು. ಧರ್ಮದಿಂದ ಕೌರವರ ಮೇಲೆ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಗಡೆ ಕಲ್ಪನೆಯನ್ನು ಜನಪದೀಯವಾಗಿ ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿ ಅದು ಇಂದಿಗೂ ಪಗಡೆ ಆಡುವ ಪರಂಪರೆ ಹಳ್ಳಿ, ಹಳ್ಳಿಗಳಲ್ಲಿ ನಡೆದುಕೊಂಡು ಬಂದಿದೆ. ಹಣಕ್ಕಾಗಿ ಆಡದೆ ಸೋಲು, ಗೆಲುವು ಮಾತ್ರ ಇದ್ದು ಎಲ್ಲರೂ ಮನರಂಜನೆಯಾಗಿ ಸಂಭ್ರಮಿಸುತ್ತಾರೆ. ಇಲ್ಲಿ ಕುತಂತ್ರ ಹೆಣೆಯುವ ಶಕುನಿಗಳಿಗೆ ಪಗಡೆ ಆಟದಲ್ಲಿ ಅವಕಾಶ ಇರುವುದಿಲ್ಲ, ಸತ್ಯ, ಧರ್ಮದಿಂದ ಆಡುವುದು ಧರ್ಮರಾಜರಿಗೆ ಆಟದಲ್ಲಿ ಅವಕಾಶ ಇರುವುದು ಆಟದ ವಿಶೇಷವಾಗಿದೆ.
Laxmi News 24×7