ಸವದತ್ತಿ: ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ನಡೆದ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯಲ್ಲಿ 34 ಸ್ಥಾನಗಳ ಪೈಕಿ 22 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ.
ಐದು ವರ್ಷದಿಂದ ಸದಸ್ಯತ್ವ ಶುಲ್ಕ ಪಾವತಿಸದೇ ಇರುವ ನೀರಾವರಿ ಇಲಾಖೆಯಿಂದ ಅರ್ಹ ನೌಕರರಿಲ್ಲದ ಕಾರಣ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ.
ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಭಾಗದ ಉಳಿದ 11 ಸ್ಥಾನಗಳಿಗೆ ಚುನಾವಣೆ ಜರುಗಿತು.
1,135 ಮತಗಳಿರುವ ಪ್ರಾಥಮಿಕ ಶಾಲಾ ವಿಭಾಗದಲ್ಲಿ 18, 262 ಮತಗಳಿರುವ ಪ್ರೌಢ ಶಾಲಾ ವಿಭಾಗದಲ್ಲಿ 2 ಮತ್ತು 184 ಮತಗಳಿರುವ ಆರೋಗ್ಯ ಇಲಾಖೆಯಿಂದ 9 ಸೇರಿ ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿದ್ದರು.
ರಾತ್ರಿ 1.30 ಗಂಟೆಯವರೆಗೆ ಫಲಿತಾಂಶ ಘೋಷಣೆ ಪ್ರಕ್ರಿಯೆ ಜರುಗಿತು. ವಿಜೇತ ಅಭ್ಯರ್ಥಿ ಹಾಗೂ ಬೆಂಬಲಿಗರು ಸಂಭ್ರಮಾಚರಿಸಿದರು.
ಆರೋಗ್ಯ ಇಲಾಖೆಯಿಂದ ಸುಭಾಷ ಹುಜರತ್ತಿ 148, ಶಶಿಧರ ಉಪ್ಪಿನ 113, ಎಂ.ಆರ್. ಸಿಂಗಣ್ಣವರ 132 ಮತ್ತು ವಿಜಯಕುಮಾರ ಬಟಕುರ್ಕಿ 116 ಮತ ಪಡೆದು ಗೆಲುವು ಸಾಧಿಸಿದರು. ಪ್ರೌಢಶಾಲಾ ವಿಭಾಗದಿಂದ ಶ್ರೀಕಾಂತ ಯರಡ್ಡಿ 202 ಮತಗಳೊಂದಿಗೆ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿಜಯ ಮೆಳವಂಕಿ 489, ನಿಂಗಪ್ಪ ಕಬ್ಬೂರು 438, ರವಿ ಸಣಕಲ್ಲ 431, ಮಹಾಂತೇಶ ಬ್ಯಾಹಟ್ಟಿ 418, ರಾಮಣ್ಣ ಗುಡಗಾರ 417, ಪವನ ಅಮಠೆ 417 ಮತ ಪಡೆದು ಜಯಗಳಿಸಿದರು. ಕಳೆದ ಅವಧಿಯ ಅಧ್ಯಕ್ಷ ಆನಂದಕುಮಾರ ಮೂಗಬಸವ ಕೇವಲ 45 ಮತ ಪಡೆದು ಪರಾಭವಗೊಂಡರು.
ಅಧ್ಯಕ್ಷ ಸ್ಥಾನಕ್ಕೆ ಲಾಬಿ: ಅವಿರೋಧ ಹಾಗೂ ಚುನಾವಣೆ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆದಿದೆ. ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ನಡುವೆ ಅಧ್ಯಕ್ಷಗಿರಿಗೆ ತೀವ್ರ ಪೈಪೋಟಿ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Laxmi News 24×7