ಹಾವೇರಿ: ‘ನೆಲ, ಜಲ, ಭಾಷೆ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಈ ದಿಸೆಯಲ್ಲಿ ಗಂಗಯ್ಯ ಕುಲಕರ್ಣಿ ಅವರು ರೈತ ಸಮುದಾಯಕ್ಕೆ ಸಾವಯವ ಕೃಷಿಯ ಬಗ್ಗೆ ಸಲಹೆ ಕೊಡುವುದರ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೆಲಸ ಮಾಡಿದ್ದಾರೆ. ಭೂತಾಯಿಯನ್ನು ವಿಷಮುಕ್ತ ಮಾಡಿ ಮನುಷ್ಯನ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಅವರ ನಿರಂತರ ಪ್ರಾಮಾಣಿಕ ಪರಿಶ್ರಮದ ಪಲವಾಗಿ ಅವರಿಗೆ ರಾಷ್ಟ್ರಿಯ ಪ್ರಶಸ್ತಿ ಸಿಕ್ಕಿದ್ದು ನಮಗೆ ತುಂಬಾ ಸಂತಸವಾಗಿದೆ’ ಎಂದು ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗೌರಿಮಠದ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭದಲ್ಲಿ ಗಂಗಯ್ಯ ಕುಲಕರ್ಣಿ ದಂಪತಿಗೆ ಸನ್ಮಾನಿಸಿ ಅವರು ಮಾತನಾಡಿದರು.
ರಟ್ಟೀಹಳ್ಳಿಯ ಸಾಹಿತಿ ಶೇಖರಗೌಡ ಪಾಟೀಲ ಮಾತನಾಡಿ, ‘ವಿಶ್ವ ಗುರು ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂಬಂತೆ ಗಂಗಯ್ಯ ಪ್ರತಿದಿನ ನೇರವಾಗಿ ಅನ್ನದಾತರ ಜಮೀನಿಗೆ ಹೋಗಿ ಕೃಷಿ ಮಾಹಿತಿ ಕೊಡುವುದರಿಂದ ರೈತರಿಗೆ ತುಂಬಾ ಸಹಾಯವಾಗಿದೆ. ಬರಗಾಲದ ಸಮಯದಲ್ಲೂ ಕಲ್ಲಂಗಡಿ, ಬೆಳ್ಳುಳ್ಳಿ, ಅನಾನಸ್, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಸಿ ಜಿಲ್ಲೆಯ ಹೆಸರನ್ನು ರಾಜ್ಯದ ತುಂಬೆಲ್ಲ ರಾರಾಜಿಸುವಂತೆ ಮಾಡಿದ್ದಾರೆ’ ಎಂದರು.
ಕಚುಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷ ಲಮಾಣಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಯ್ಯ ಕುಲಕರ್ಣಿ, ‘ಸಕಲ ಜೀವಿಗೂ ಅನ್ನ ನೀಡುವ ಅನ್ನದಾತರಿಗೆ ನನ್ನ ಅಳಿಲು ಸೇವೆಯಾಗಿದ್ದು, ಅನ್ನದಾತರ, ಬಂಧುಗಳ, ಹಿತೈಷಿಗಳ ಪ್ರೋತ್ಸಾಹ ಮತ್ತು ಸಹಕಾರ ಕಾರಣವಾಗಿದೆ. ಪ್ರಶಸ್ತಿ ಮತ್ತು ಸನ್ಮಾನಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ’ ಎಂದರು.