ಧಾರವಾಡ : ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುರುಕಾಗಿರುವ ನಗರದ ಪೊಲೀಸರು, ಇದೀಗ ಸಮಾಜಘಾತುಕ ಶಕ್ತಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಆರಂಭಿಸಿದ್ದಾರೆ.
ನಗರದಲ್ಲಿನ ರೌಡಿ ಶೀಟರ್ಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ ತೆರಳಿ ಜಾಲಾಡಿರುವ ಪೊಲೀಸರು ಯಾವುದೇ ಸಂದರ್ಭದಲ್ಲಿ ಬಾಲ ಬಿಚ್ಚದಂತೆ ತಾಕೀತು ಮಾಡಿದ್ದಾರೆ.
ಎಸಿಪಿ ಬಿ.ಬಸವರಾಜ ಅವರ ಮಾರ್ಗದರ್ಶನದಲ್ಲಿ ನಗರದ ೩೨ ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ.
ಶಹರ ಪೊಲೀಸ್ ಠಾಣೆಯ ಇನಸ್ಪೆಕ್ಟರ್ ವಿಶ್ವನಾಥ ಚೌಗಲೆ, ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ಉಪನಗರ ಠಾಣೆಯ ಪಿಐ ದಯಾನಂದ ಶೇಗುಣಿಸಿ ನೇತೃತ್ವದಲ್ಲಿ ಸಿಬ್ಬಂದಿ ರೌಡಿಗಳ ಮನೆಗಳ ಬಾಗಿಲು ತಟ್ಟಿದ್ದಾರೆ.
ದಾಳಿ ವೇಳೆ ಮಾರಕಾಸ್ತ್ರಗಳು ಮತ್ತು ಇನ್ನಿತರ ನಿಷೇಧಿತ ಮಾದಕ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಗಾಂಜಾ ಲಭ್ಯವಾಗಿದೆ ಎನ್ನಲಾಗಿದೆ.