ಬೆಳಗಾವಿ: ‘ಸಮಾನತೆ ತತ್ವ, ಸಾಮಾಜಿಕ ಕ್ರಾಂತಿ ಹಾಗು ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆ ನೀಡಿ, ಸೂಳೆ ಸಂಕವ್ವ ಸೇರಿದಂತೆ ಎಲ್ಲ ವೃತ್ತಿಯವರಿಗೆ ಸಮಾನವಾಗಿ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಬಸವಣ್ಣ ಎಲ್ಲರಿಗೂ ಪಾವಿತ್ರ್ಯತೆ ಕಲಿಸಿದ ಪುರುಷೋತ್ತಮ’ ಎಂದು ಯಮಕನಮರಡಿಯ ಹುಣಸಿಕೊಳ್ಳ ಮಠದ ಸಿದ್ಧಬಸವ ದೇವರು ಶ್ಲಾಘಿಸಿದರು.
ಇಲ್ಲಿನ ಶಿವಬಸವ ನಗರದ ಪ್ರಭುದೇವ ಸಭಾಗೃಹದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಗನೂರು ರುದ್ರಾಕ್ಷಿಮಠದ ಸಹಯೋಗದಲ್ಲಿ ಬಸವ ಜಯಂತ್ಯುತ್ಸವದ ಎರಡನೇ ದಿನವಾದ ಶನಿವಾರ ಹಮ್ಮಿಕೊಂಡಿದ್ದ ವಚನ ಸಂಶೋಧನಾ ಶತಮಾನೋತ್ಸವ ವರ್ಷಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಆಚರಣೆಗಳು ಇಲ್ಲದಿದ್ದರೆ ವಿಚಾರಗಳು ಉಳಿಯುವುದಿಲ್ಲ. ಆಚರಣೆಗಳಿಂದಲೇ ವಿಚಾರಗಳ ಜೀವಂತಿಕೆ ಸಾಧ್ಯ. ಮೊಬೈಲ್ ಹಾವಳಿಯಿಂದ ಇಂದು ಹಾಳಾಗುತ್ತಿರುವ ಯುವಜನರಿಗೆ ಧಾರ್ಮಿಕ ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಇದೆ. ಆಗ, ಈ ನೆಲದ ಸಂಸ್ಕೃತಿ, ಆಚಾರ-ವಿಚಾರ ಉಳಿಯುತ್ತವೆ’ ಎಂದರು.
‘ವಚನ ಪಿತಾಮಹ ಫ.ಗು.ಹಳಕಟ್ಟಿ’ ವಿಷಯ ಕುರಿತು ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಕೆ.ಎಸ್.ಕೌಜಲಗಿ, ‘ಲಿಂಗಾಯತರು ಹಿಂದೂಗಳಲ್ಲ. ವೀರಶೈವರೂ ಅಲ್ಲ. ಬದಲಿಗೆ, ಬಸವ ಅನುಯಾಯಿಗಳು. ಅವರು ಎಂದೂ ಅಸ್ಪೃಶ್ಯತೆ ಪರಿಪಾಲಿಸಬಾರದು ಎಂಬ ನೀತಿ ತಿಳಿಸಿಕೊಟ್ಟ ಫ.ಗು.ಹಳಕಟ್ಟಿ ಒಬ್ಬ ಧಾರ್ಮಿಕ ಸಂತ. 12ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಚೈತನ್ಯ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಚ್ಚಿ ಹೋಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಒಂದು ವಿಶ್ವವಿದ್ಯಾಲಯ ಮಾಡಲಾರದಷ್ಟು ಸಾಧನೆಯನ್ನು ಒಬ್ಬ ವ್ಯಕ್ತಿಯಾಗಿ ಮಾಡಿದ್ದಾರೆ’ ಎಂದು ಸ್ಮರಿಸಿದರು.