ಮೂಡಲಗಿ: ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಗೋಕಾಕ ತಾಲ್ಲೂಕಿನ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆ 9 ದಿನಗಳ ಕಾಲ ವೈಭವದಿಂದ ನೆರವೇರಿತು. ಹಿಂದೂ-ಮುಸ್ಲಿಮರು ಶ್ರದ್ಧೆಯಿಂದ ಪಾಲ್ಗೊಂಡು, ಸಾಮರಸ್ಯದ ಸಂದೇಶ ಸಾರಿದರು.
ಜಾತ್ರೆ ಅಂಗವಾಗಿ ತಳಿರು-ತೋರಣಗಳಿಂದ ಮಠ ಅಲಂಕೃತಗೊಂಡಿತ್ತು.
ಆವರಣದ ತುಂಬೆಲ್ಲ ರಂಗೋಲಿ ಚಿತ್ತಾರ ಅರಳಿತ್ತು. ಜಾನಪದ, ವಚನ ಸಾಹಿತ್ಯ, ಸಂಸ್ಕಾರ ಮತ್ತು ಸಂಸ್ಕೃತಿ, ಆರೋಗ್ಯದ ಸೂತ್ರಗಳು, ದೇಶಭಕ್ತಿ, ಸರ್ವಧರ್ಮಗಳ ಸಾಮರಸ್ಯ ಮತ್ತಿತರ ವೈವಿಧ್ಯಮಯವಾದ ವಿಷಯಗಳ ಕುರಿತು ಪ್ರತಿದಿನ ವಿದ್ವಾಂಸರು ಉಪನ್ಯಾಸ ನೀಡಿ, ಗ್ರಾಮೀಣ ಭಾಗದ ಜನರಿಗೆ ಜ್ಞಾನ ದಾಸೋಹ ಉಣಬಡಿಸಿದರು.
ವಿದೂಷಿ ನಾಗರತ್ನ ಹಡಗಲಿ ನೇತೃತ್ವದ ಗೋಕಾಕದ ರತಿಕಾ ನೃತ್ಯ ಕಲಾನಿಕೇತನ ತಂಡದವರು ಭರತನಾಟ್ಯದಿಂದ ವಚನ ವೈಭವ ಮತ್ತು ಭಕ್ತಿಗೀತೆ ಪ್ರಸ್ತುತಪಡಿಸಿ, ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.
ನೃತ್ಯದ ಮೂಲಕ ಬಾಲೆಯರು ‘ಬಸವಣ್ಣ ನಿನ್ನ ಕಂಡು ಕಂಡು’ ಎಂಬ ಅಲ್ಲಮಪ್ರಭುದೇವರ ವಚನ, ‘ಕೆರೆಯ ನೀರು ಮರದ ಪುಷ್ಪ ಧರಿಸಿದಡೇನು ಅಯ್ಯಾ ಎಂಬ ಸಿದ್ಧರಾಮರ ವಚನ ಮತ್ತು ‘ಭಕ್ತಿಯೆಂಬ ಪೃಥ್ವಿ ಮೇಲೆ’ ಎಂಬ ಬಸವಣ್ಣನವರ ವಚನವನ್ನು ಪ್ರಸ್ತುತಪಡಿಸಿ, ಸಹಸ್ರಾರು ಜನರಿಗೆ ಕಲ್ಯಾಣದ ದರ್ಶನ ಮಾಡಿದರು.
‘ವಿಶ್ವ ವಿನೂತನ ವಿದ್ಯಾಚೇತನ’ ಹಾಡಿಗೆ ಹೆಜ್ಜೆ ಹಾಕಿ ಕನ್ನಡಾಭಿಮಾನ ಮೆರೆದರೆ, ರಾಷ್ಟ್ರಧ್ವಜ ಹಾರಿಸುತ್ತ ‘ವಂದೇ ಮಾತರಂ’ ದೇಶಭಕ್ತಿ ಗೀತೆ ಪ್ರದರ್ಶಿಸಿದರು. ಶಿವತಾಂಡವ ಮತ್ತು ಜಾನಪದ ಹಾಡುಗಳ ಗುಂಪು ನೃತ್ಯಗಳು ಜನರ ಮನತಣಿಸಿದವು.