ಬೆಂಗಳೂರು: ಎರಡು ತಿಂಗಳಿಂದ ಬಂದ್ ಆಗಿದ್ದ ವಿಮಾನ ಸೇವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇಂದಿನಿಂದ ಆಗಸದಲ್ಲಿ ವಿಮಾನಗಳ ಹಾರಾಟ ಶುರುವಾಗಿಲಿದೆ. ಜೊತೆಗೆ ಕೊರೊನಾ ವೈರಸ್ ಭಯವೂ ಸಹ ಶುರುವಾಗಲಿದೆ.
ಹೌದು. ವಿದೇಶದಿಂದ ಹಿಂದಿರುಗಿ ಬಂದವರಿಂದಲೇ ನಮ್ಮ ದೇಶಕ್ಕೆ ಮಾತ್ರವಲ್ಲ ನಮ್ಮ ರಾಜ್ಯಕ್ಕೂ ಹಾಗೂ ಬೆಂಗಳೂರಿಗೂ ಮೊದಲಿಗೆ ಕೊರೊನಾ ಪಾಸಿಟಿವ್ ಬಂದಿದ್ದು. ಆಗ ಕೊರೊನಾ ಕೇಕೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿ ವಿಮಾನ ಸೇವೆಗೆ ಬ್ರೇಕ್ ಹಾಕಿತ್ತು. ಈಗ ದೇಶದಲ್ಲಿ ಮಾತ್ರವಲ್ಲ ನಮ್ಮ ರಾಜ್ಯದಲ್ಲೂ ಕೊರೊನಾ ವೈರಸ್ ರಣಭೀಕರತೆ ಸೃಷ್ಟಿ ಮಾಡಿದೆ.
ಕಳೆದ ವಾರ ಏರ್ ಲಿಫ್ಟ್ ಮೂಲಕ ವಿದೇಶದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರನ್ನ ಕರೆಸಿಕೊಂಡಿದೆ. ಇದರಲ್ಲಿ ಬೆಂಗಳೂರಿಗೆ ಆಗಮಿಸಿದ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ಈಗ ಇಂದಿನಿಂದ ಡೊಮೆಸ್ಟಿಕ್ ಏರ್ ಲೈನ್ಸ್ ಶುರುವಾಗ್ತಿರೋದು ಬೆಂಗಳೂರಿಗೆ ಕೊರೊನಾ ಕಂಟಕವಾಗೋ ಸಾಧ್ಯತೆಗಳು ದಟ್ಟವಾಗಿದೆ. ಲಾಕ್ ಡೌನ್ ಸಡಿಲಿಕೆ ಮಾಡಿದ್ರಿಂದ ಬೇರೆ ರಾಜ್ಯದಿಂದ ಬಂದವರಿಂದ ಗ್ರೀನ್ ಝೋನ್ ನಲ್ಲಿದ್ದ ಎಷ್ಟೋ ಜಿಲ್ಲೆಗಳಿಗೆ ಕೊರೊನಾ ವ್ಯಾಪಿಸಿರೋದು ನಮ್ಮ ಕಣ್ಮುಂದೆಯೇ ಇದೆ. ಈ ಕೇಸ್ ಗಳ ಸಂಖ್ಯೆ ಇನ್ನೂ ಹೆಚ್ಚಾಗೋ ಸಾಧ್ಯತೆಗಳು ಸಹ ಅಲ್ಲಗೆಳೆಯುವಂತಿಲ್ಲ.