ಕಲಬುರಗಿ: ತಂದೆಯೊಬ್ಬ ತನ್ನ ಮಗ ಹಾಗೂ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದ ಬಳಿ ಪೋಚಾವರಂದಲ್ಲಿ ನಡೆದಿದೆ.
ಚಿಂಚೋಳಿ ತಾಲೂಕು ಕುಂಚಾವರಂ ಗ್ರಾಮದ ಹಾಗೂ ಸದ್ಯ ತೆಲಂಗಾಣದಲ್ಲಿ ವಾಸವಾಗಿದ್ದ ಹಣಮಂತ ವಡ್ಡರ್ (40) ಹಾಗೂ ಆತನ ಪುತ್ರ ಓಂಕಾರ (9), ಪುತ್ರಿ ಅಕ್ಷರಾ (6) ಮೃತರು.
ಮೃತ ಹಣಮಂತ ಕೆಲ ವರ್ಷಗಳಿಂದ ತೆಲಂಗಾಣ ರಾಜ್ಯದ ತಾಂಡೂರಿನಲ್ಲಿ ವಾಸವಿದ್ದರು. ಇತ್ತೀಚೆಗೆ ಹಣಮಂತ ತನ್ನ ಮಕ್ಕಳೊಂದಿಗೆ ಕುಂಚಾವರಂ ಗ್ರಾಮಕ್ಕೆ ಬಂದಿದರು. ಶುಕ್ರವಾರ ತನ್ನ ಸಹೋದರ ಗ್ರಾಪಂ ಸದಸ್ಯ ಗೋಪಾಲ ಅವರಿಗೆ ಕರೆ ಮಾಡಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಶವಗಳ ಅಂತ್ಯಕ್ರಿಯೆ ಮಾಡಿ ಎಂದು ಹೇಳಿದ್ದರಂತೆ. ಇದರಿಂದ ಗಾಬರಿಗೊಂಡ ಗೋಪಾಲ ಹಾಗೂ ಕುಟುಂಬಸ್ಥರು ಹಣಮಂತ ಅವರನ್ನು ತಕ್ಷಣ ಹುಡುಕಾಡಿದ್ದಾರೆ. ಕುಂಚಾವರಂ ಪೊಲೀಸರು ಮತ್ತು ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಂದೆಡೆ ಕುಟುಂಬಸ್ಥರು, ಗ್ರಾಮಸ್ಥರು, ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಎಲ್ಲರೂ ಸೇರಿ ಹುಡುಕಿದರೂ ತಂದೆ ಮಕ್ಕಳು ಮಾತ್ರ ಪತ್ತೆಯಾಗಿರಲಿಲ್ಲ. ಆದರೆ ಭಾನುವಾರ ಕುಂಚಾವರಂ ಹತ್ತಿರದ ಪೋಚಾವರಂ ಗ್ರಾಮದ ತೋಟದ ಬಾವಿಯಲ್ಲಿ ಮೂವರ ಶವಗಳು ಪತ್ತೆಯಾಗಿವೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಶವ ಸಿಗುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಕಣ್ಣಿರು ಹಾಕುವ ದೃಶ್ಯ ಕಂಡುಬಂತು. ಆತ್ಮಹತ್ಯೆಗೆ ಕಾರಣ ಏನು ಅನ್ನೋದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಸ್ಥಳಕ್ಕೆ ಚಿಂಚೋಳಿ ಡಿಎಸ್ಪಿ ಕೆ ಬಸವರಾಜ, ಚಿಂಚೋಳಿ ಸಿಪಿಐ ಅಂಬಾರಾಯ ಕಮಾಲಮನಿ, ಕುಂಚಾವರಂ ಪಿಎಸ್ಐ ಉದಂಡಪ್ಪ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Laxmi News 24×7