ಬೆಂಗಳೂರು: ಕರೊನಾ ಸೋಂಕಿನ ಭೀತಿಯಿಂದ ಹೊರಬರಲು ಇನ್ನೂ ಆಗಿಲ್ಲ. ಅದರ ಬೆನ್ನಲ್ಲೇ ಕರೊನಾ ರೂಪಾಂತರಿ ಆವರಿಸಿಕೊಂಡಿದೆ. ಈಗ ಹಕ್ಕಿ ಜ್ವರ!
ನೆರೆಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲೂ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ. ಹಾಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಚಿವ ಪ್ರಭು ಚವ್ಹಾಣ್ ಹೈ ಅಲರ್ಟ್ ಘೋಷಿಸಿದ್ದಾರೆ.
ಹಕ್ಕಿ ಜ್ವರದ ಸರ್ವೇಕ್ಷಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿರುವ ಪ್ರಭು ಚವ್ಹಾಣ್, ಕೇರಳಕ್ಕೆ ಹೊಂದಿಕೊಂಡ ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ರೋಗ ತಡೆಗಟ್ಟಲು ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ರೋಗ ನಿಯಂತ್ರಣ ಸಮಿತಿ ಸಭೆ ಜರುಗಿಸಿ ಸೂಕ್ತ ಮುಂಜಾಗ್ರತ ಕ್ರಮಕೈಗೊಳ್ಳಲು ತಿಳಿಸಿದ್ದಾರೆ