ದಾವಣಗೆರೆ: ನಗರದಲ್ಲಿ ನಡೆದ ಅದ್ಧೂರಿ ಶೃಂಗ ಸಮ್ಮೇಳನದಲ್ಲಿ ವೀರಶೈವ ಪಂಚಪೀಠಗಳ ಪೀಠಾಧೀಶ್ವರರು, ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಭಕ್ತರಿಗೆ ದರ್ಶನ ನೀಡಿದರು. ದರ್ಶನದ ಜೊತೆಗೆ ಎಲ್ಲ ಶ್ರೀಗಳು ತಮ್ಮ ಹಿತವಚನ ನೀಡಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ರೇಣುಕಾ ಮಂದಿರದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ವೀರಶೈವ ಧರ್ಮದಲ್ಲಿ ಪಂಚಪೀಠಗಳಿಗೆ ಇರುವ ಮಹತ್ವ ಯಾವುದಕ್ಕೂ ಇಲ್ಲ. ಪಂಚಪೀಠಾಧೀಶ್ವರರನ್ನು ದರ್ಶನ ಮಾಡಿದರೆ ಭಗವಂತನನ್ನು ದರ್ಶನ ಮಾಡಿದಂತೆ. ಜಾತಿ ಜಾತಿಗಳ ಹೆಸರಿನಲ್ಲಿ ಮನುಷ್ಯತ್ವ ಛಿದ್ರಗೊಂಡು ಹೋಗುತ್ತಿರುವುದು ನೋವು ಉಂಟುಮಾಡುತ್ತಿದೆ. ಬಸವಣ್ಣನ ಹೆಸರಿನಲ್ಲಿ ಕೆಲಸ ಮಾಡುವ ಮಠಾಧೀಶರು, ವೀರಶೈವ ಬೇರೆ ಹಾಗೂ ಲಿಂಗಾಯತರು ಬೇರೆ ಅಂತ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ಪಂಚಾಚಾರ್ಯರ ಹಾಗೂ ಬಸವತತ್ವ ಅನುಯಾಯಿಗಳದ್ದು ತಾಯಿ ಮಕ್ಕಳ ಸಂಬಂಧ. ಅರಿವು ಇಲ್ಲದೇ ಇರುವುದಕ್ಕೆ ಈ ರೀತಿಯ ಘಟನೆಗಳು ನಡೆಯುತ್ತಿವೆ. ನಾವುಗಳು ಒಂದೇ ವೇದಿಕೆಯಲ್ಲಿ ಸೇರಲು ಡಾ. ಶಾಮನೂರು ಶಿವಶಂಕರಪ್ಪನವರು ಕಾರಣ. ಮೇ 2ರಂದು ನೀವೆಲ್ಲರೂ ಒಂದಾಗಬೇಕೆಂದು ಎಂದು ಹೇಳಿದರು.
ವೀರಶೈವ ಧರ್ಮದಿಂದ ಲಿಂಗಾಯತ ಒಡೆಯುವ ಸಂಧರ್ಭದಲ್ಲಿ ಶಿವಶಂಕರಪ್ಪನವರು ಎರಡೂ ಒಂದೇ ಎಂಬ ಗಟ್ಟಿ ಧ್ವನಿ ಎತ್ತದ್ದರು. ಯಡಿಯೂರಪ್ಪನವರಿಗೆ ಸ್ವಪಕ್ಷದಿಂದಲೇ ಕಿರುಕುಳ ನೀಡಲಾಯಿತು. ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ, ಒಮ್ಮೆ ಕೂಡ ಪೂರ್ಣಾವಧಿ ಅಧಿಕಾರ ಮಾಡಲು ಆಗಲಿಲ್ಲ. ಹೈಕಮಾಂಡ್ ನಿರ್ಧಾರದಿಂದ ಇಡೀ ಸಮಾಜಕ್ಕೆ ಅಘಾತ ಉಂಟಾಯಿತು. ಹಾಗಾಗಿ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು. ಬಿಎಸ್ವೈ ಹೇಳಿದ ವ್ಯಕ್ತಿಗಳನ್ನು ಆಯ್ಕೆ ಮಾಡಿದರೆ ಬಹುಮತದ ಸರ್ಕಾರ ಬರುತ್ತಿತ್ತು.
ಅವರನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ. ಕಿರುಕುಳ ನೀಡಿದ್ದರಿಂದ ಅವರು ಬಹಳ ನೋವು ಅನುಭವಿಸಬೇಕಾಯಿತು. ಆದ್ದರಿಂದ ಅವರು ಎಲ್ಲೇ ಹೋದರು ಹೆಚ್ಚು ಮಾತನಾಡುವುದಿಲ್ಲ. ಇನ್ನು ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ, ಕ್ರೀಯಾಶೀಲರಾಗಿ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ದಿನ ರಾಜಕೀಯ ಜೀವನದಲ್ಲಿ ಉಜ್ವಲ ಆಗಲಿದೆ ಎಂದು ರಂಭಾಪುರಿ ಶ್ರೀಗಳು ಯಡಿಯೂರಪ್ಪನವರನ್ನು ಕೊಂಡಾಡಿದರು.