ಚಿಕ್ಕೋಡಿ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ದ್ಯಾವನಗೌಡ ಪಾಟೀಲ ಅವರು ಸಾಕಿದ ಎತ್ತನ್ನು ರಾಯಬಾಗ ತಾಲ್ಲೂಕಿನ ಇಡ್ನಾಳ ಗ್ರಾಮದ ರೈತ ಸದಾಶಿವ ಢಾಂಗೆ ಅವರು ₹ 18 ಲಕ್ಷಕ್ಕೆ ಖರೀದಿಸಿದ್ದಾರೆ.
ಆರು ವರ್ಷ ವಯಸ್ಸಿನ ಈ ಎತ್ತಿನ ಮೂಲ ಹೆಸರು ‘ಹಿಂದೂಸ್ತಾನ್’.
ಈಗ ರೈತ ಇಟ್ಟ ಹೆಸರು ‘ಟೈಗರ್’. ಶರ್ಯತ್ತಿನಲ್ಲಿ ಇದರ ಹೆಸರು ಚಿರತೆ.
ದ್ಯಾವನಗೌಡ ಅವರು ಇದನ್ನು ಮೂರು ವರ್ಷ ವಯಸ್ಸಿನ ಕರು ಇದ್ದಾಗ ₹1 ಲಕ್ಷಕ್ಕೆ ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಅದು ₹17 ಲಕ್ಷ ಲಾಭ ಮಾಡಿಕೊಟ್ಟಿದೆ. ದಿನವೂ ಎರಡು ಹೊತ್ತು ಮೈ ತೊಳೆದು, ಹಾಲು, ಮೊಟ್ಟೆ, ಕಾರೀಖು, ಗೋಡಂಬಿ, ಜವಿಗೋಧಿ, ಗೋವಿನ ಜೋಳ, ಹಸಿರು ಮೇವು ಮುಂತಾದವು ತಿನ್ನಿಸಿ ಪೈಲ್ವಾನನಂತೆ ಬೆಳೆಸಿದ್ದಾರೆ.
ತೆರೆದ ಬಂಡಿ ಓಟದ ಸ್ಪರ್ಧೆಯಲ್ಲಿ ಈ ಎತ್ತು ದಾಖಲೆ ಬರೆದಿದೆ. ಮೂರು ವರ್ಷಗಳಲ್ಲಿ 25 ಮೈದಾನಗಳಲ್ಲಿ ಓಡಿ ಬಹುಮಾನ ಗಿಟ್ಟಿಸಿದೆ. ಈವರೆಗೆ 60 ಗ್ರಾಂ ಚಿನ್ನ, 4 ಬೈಕ್, ₹10 ಲಕ್ಷಕ್ಕೂ ಅಧಿಕ ನಗದು ಗೆದ್ದಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಮಹಾರಾಷ್ಟ್ರದ ಜತ್, ಉಮರಾಣಿ, ಬಿಳ್ಳೂರ ಮುಂತಾದ ಕಡೆಗೆ ಮೈದಾನಗಳಲ್ಲಿ ‘ಟೈಗರ್’ ದಾಖಲೆ ಬರೆದಿದೆ.