ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ (ಅಕಾಡೆಮಿಕ್ ಕೌನ್ಸಿಲ್) ರಚನೆ ವಿಳಂಬ ಆಗಿರುವ ಕಾರಣ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆದಿಲ್ಲ.
ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯದ 108 ಕಾನೂನು ಕಾಲೇಜುಗಳಿವೆ.
2021-22 ಮತ್ತು 2022-23ನೇ ಸಾಲಿನ ಘಟಿಕೋತ್ಸವ ಈವರೆಗೆ ನಡೆದಿಲ್ಲ. ಕಾನೂನು ಪದವಿ ಹಾಗೂ ಸ್ನಾತಕೋತ್ತರ ಪದವಿಯ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಮಾಣ ಪತ್ರದ ನಿರೀಕ್ಷೆಯಲ್ಲಿದ್ದಾರೆ.
ರಚನೆಯಾಗದ ಮಂಡಳಿ:
‘ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಮಂಡಳಿ ರಚನೆಯಾಗಿಲ್ಲ. ಮಂಡಳಿ ರಚಿಸಿ, ಅದರ ಒಪ್ಪಿಗೆ ಪಡೆದ ಬಳಿಕವೇ ಘಟಿಕೋತ್ಸವ ನಡೆಸಲು ಅವಕಾಶವಿದೆ. ಹೀಗಾಗಿ ಮಂಡಳಿಯನ್ನು ತ್ವರಿತವಾಗಿ ರಚಿಸಿ’ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ರಾಜ್ಯಪಾಲರಿಗೆ ಹಲವು ಬಾರಿ ಮನವಿ ಮಾಡಿದೆ.
ಸ್ಪಷ್ಟನೆ ಕೋರಿಕೆ:
‘ಮಂಡಳಿ ಒಟ್ಟು 25 ಸದಸ್ಯರನ್ನು ಒಳಗೊಂಡಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರ ಐವರನ್ನು ಐವರನ್ನು ಸದಸ್ಯರನ್ನಾಗಿ ನೇಮಿಸುತ್ತದೆ. ಕಳೆದ ವರ್ಷವೇ ಸರ್ಕಾರ ಸದಸ್ಯರ ಪಟ್ಟಿ ಕಳುಹಿಸಿಕೊಟ್ಟಿತ್ತು. ಈ ಸದಸ್ಯರ ಬಗ್ಗೆ ರಾಜ್ಯಪಾಲರ ಕಚೇರಿ ಹೆಚ್ಚಿನ ವಿವರಣೆ ಬಯಸಿ, ಸರ್ಕಾರ ಮತ್ತು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿತ್ತು. ಇದರಿಂದ ಮಂಡಳಿ ಇನ್ನೂ ರಚನೆಯಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7