ಹಾವೇರಿ: ಕಳೆದ ಏಪ್ರಿಲ್ 19 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಯುವಕನೊಬ್ಬನ ಮೇಲೆ ಶೂಟೌಟ್ ಮಾಡಿ ಪರಾರಿಯಾಗಿದ್ದವನನ್ನು ಹಾವೇರಿ ಜಿಲ್ಲಾ ಪೊಲೀಸರು ಅಂತೂ ಹೆಡೆಮುರಿಕಟ್ಟಿದ್ದಾರೆ.
ಬಂಧಿತನನ್ನು ಶಿಗ್ಗಾವಿ ಧಖನಿ ಓಣಿಯ ಮಂಜುನಾಥ್ ಶಾಂತಪ್ಪ ಪಾಟೀಲ ಎಂದು ಗುರುತಿಸಲಾಗಿದೆ.
ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಎಸ್ಪಿ ಹನುಮಂತರಾಯ ಈ ಮಾಹಿತಿ ತಿಳಿಸಿದರು.
ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಶಿವಪುರ ಹಾಗೂ ಆತನ ನಾಲ್ವರು ಸ್ನೇಹಿತರು ಏ.19 ರಂದು ರಾತ್ರಿ 9ಕ್ಕೆ ರಾಜಶ್ರೀ ಚಿತ್ರಮಂದಿರಕ್ಕೆ ಕೆಜಿಎಫ್ 2 ಸಿನಿಮಾ ನೋಡಲು ತೆರಳಿದ್ದರು. ಮಧ್ಯಂತರದಲ್ಲಿ ಆರೋಪಿ ಮಂಜುನಾಥ್ ಪಾಟೀಲ ಕ್ಷುಲ್ಲಕ ವಿಷಯವಾಗಿ ವಸಂತಕುಮಾರ ಶಿವಪುರ ಮೇಲೆ ಕಂಟ್ರಿಮೇಡ್ ಪಿಸ್ತೂಲಿನಿಂದ ಐದು ಸುತ್ತು ಗುಂಡು ಹಾರಿಸಿದ್ದ. ಇದರಿಂದ ವಸಂತಕುಮಾರ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
‘ಆರೋಪಿ ಮಂಜುನಾಥ ಪಾಟೀಲನನ್ನು ಪ್ರಕರಣದ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಬಸ್ ನಿಲ್ದಾಣದ ಬಳಿ ಮೇ 19 ರಂದು ಬೆಳಿಗ್ಗೆ ಬಂಧಿಸಲಾಗಿದೆ. ಬಂಧಿತನಿಂದ ಒಂದು ಪಿಸ್ತೂಲು ಹಾಗೂ 15 ಜೀವಂತ ಗುಂಡುಗಳನ್ನು, 2 ಖಾಲಿ ಕೋಕಾ, ಒಂದು ಸ್ಕೂಟರ್, ಒಂದು ಮೊಬೈಲ್ ವಶಪಡಿಸಿಕೊಂಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.