ಬೆಳಗಾವಿ: ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ.ಯಲ್ಲಿರುವ ಯುವತಿಯ ಪೋಷಕರನ್ನು ಎಸ್ಐಟಿ ತಂಡದವರು ಬೆಂಗಳೂರಿನಿಂದ ಬೆಳಗಾವಿಗೆ ಕರೆ ತಂದು ಇಲ್ಲಿನ ಎಪಿಎಂಸಿ ಠಾಣೆಗೆ ಭಾನುವಾರ ಮುಂಜಾನೆ ಹಸ್ತಾಂತರಿಸಿದರು.
ಎಸ್ಐಟಿ ತಂಡದ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ 16 ಎಸ್ಐಟಿ ಸಿಬ್ಬಂದಿಯ ತಂಡ ಎಪಿಎಂಸಿ ಪೊಲೀಸ್ ಠಾಣೆಗೆ ಬಂದು, ಸಂತ್ರಸ್ತೆಯ ಕುಟುಂಬದವರನ್ನು ತಲುಪಿಸಿದರು. ಬಳಿಕ ಪೊಲೀಸರಿಗೆ ಹಸ್ತಾಂತರಿಸಿತು.
ಠಾಣೆಯ ಸಿಪಿಐ ದಿಲೀಪ್ಕುಮಾರ್ ಒಂದು ಗಂಟೆಗೂ ಹೆಚ್ಚು ಕಾಲ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದರು. ಬಳಿಕ ನಗರದಲ್ಲಿ ಕುಟುಂಬ ವಾಸವಿದ್ದ ಬಾಡಿಗೆ ಮನೆಗೆ ಕರೆದೊಯ್ದರು. ಮನೆ ಬಳಿ ಎಎಸ್ಐ, ಮೂವರು ಕಾನ್ಸ್ಟೆಬಲ್ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಯುವತಿ ತಂದೆ ಮಾಧ್ಯಮದವರೊಂದಿಗೆ ಹೆಚ್ಚು ಮಾತನಾಡಲು ನಿರಾಕರಿಸಿದರು. ಈಗ ಏನನ್ನೂ ಕೇಳಬೇಡಿ. ಮತ್ತೆ ನಿಮ್ಮ ಬಳಿಗೆ ಬರುತ್ತೇನೆ. ಏನು ಹೇಳಬೇಕೋ ಅದನ್ನೆಲ್ಲವನ್ನೂ ಹೇಳಿರುವೆ ಎಂದರು.
ಮಗಳು ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೊ ಹೇಳಿಕೆ ನೋಡಿದ್ದೇನೆ. ಸದ್ಯಕ್ಕೆ ಆ ಬಗ್ಗೆ ಮಾತನಾಡಲಾರೆ. ನಾವು ನೆಮ್ಮದಿಯಿಂದ ಇರಲು ಬಿಡಿ ಎಂದು ಕೋರಿದರು.