Sex scandal: ಮೀಟೂ ಅಭಿಯಾನದಿಂದ ಕನ್ನಡ ಚಿತ್ರರಂಗದ ಕೆಲವು ಸ್ಟಾರ್ ನಟರು, ನಿರ್ದೇಶಕರಲ್ಲಿ ನಡುಕವುಂಟಾಗಿದೆ. ಕೇರಳ ಚಿತ್ರರಂಗದಲ್ಲಿ ಈಗಾಗಲೇ ಘಾಟಾನುಘಟಿ ಸ್ಟಾರ್ ನಟರ ಹೆಸರು ಕೇಳಿ ಬಂದಿದೆ. ಸೂಪರ್ ಸ್ಟಾರ್ ನಟರಾದ ನವಿನ್ ಪೌಲಿ ಹಾಗೂ ಜಯಸೂರ್ಯ ಸೇರಿದಂತೆ ಹಲವರ ಮೇಲೆ ಕೇರಳದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಲ್ಲಿ ಹೇಮಾ ಕಮಿಟಿ ವರದಿ ಮಂಡನೆಯ ನಂತರ ಮೀಟೂ ಅಭಿಯಾನಕ್ಕೆ ಅಲ್ಲಿ ಬೆಲೆ ಬಂದಿದ್ದು, ಸ್ಟಾರ್ ನಟರನ್ನು ನಡುಗಿಸಿದೆ. ಇದೀಗ ಕನ್ನಡ ಚಿತ್ರರಂಗದ ಕರಾಳತೆಗಳೂ ಹೊರ ಬರುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲೂ ಕಳೆದ ಐದು ವರ್ಷಗಳ ಹಿಂದೆ ಮೀಟೂ ಅಭಿಯಾನ ಜೋರಾಗಿತ್ತು. ಮೀಟೂ ಅಭಿಯಾನದಲ್ಲಿ ಬಹುಭಾಷೆ ಹಾಗೂ ಸ್ಟಾರ್ ನಟ ಅರ್ಜುನ್ ಸರ್ಜಾ ಹೆಸರು ಕೇಳಿ ಬಂದಿತ್ತು. ಪ್ರಮುಖ ನಟಿ ಶೃತಿ ಹರಿಹರ್ ಅವರು ಈ ಆರೋಪ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಕನ್ನಡ ಚಿತ್ರರಂಗ ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿದೆ. ಕನ್ನಡ ಚಿತ್ರರಂಗದ ಕಾಂತಾರ, ಕೆಜಿಎಫ್ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿವೆ. ಈ ನಡುವೆ ಚಿತ್ರರಂಗದ ಒಳಗೆ ಹಾಗೂ ತಳ ಮಟ್ಟದಲ್ಲಿ ಏನಾಗುತ್ತಿದೆ ಎನ್ನುವ ವಿಷಯಗಳು ಹೊರಗೆ ಬರುತ್ತಿಲ್ಲ.
ಈಗ ಹಲವು ಪ್ರಮುಖ ನಟ, ನಟಿಯರು, ಕಲಾವಿದರು ಹಾಗೂ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕೇರಳದಲ್ಲಿ ರಚನೆಯಾದ ಹೇಮಾ ಕಮಿಟಿ ಮಾದರಿಯಲ್ಲೇ ಕರ್ನಾಟಕದಲ್ಲೂ ಕಮಿಟಿಯೊಂದು ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಹಗರಣ ನಡೆಸಿಯೂ ಹಣ, ಅಧಿಕಾರ ಹಾಗೂ ರಾಜಕೀಯ ಬೆಂಬಲದಿಂದ ಮೆರೆಯುತ್ತಿರುವ ಸ್ಟಾರ್ ನಟರು & ನಿರ್ದೇಶಕರಲ್ಲಿ ಸಣ್ಣಗೆ ಬೆವರಿಳಿಸಿದೆ.
ಪಾತ್ರ ಬೇಕಾ ಪಲ್ಲಂಗಕ್ಕೆ ಬನ್ನಿ
ಮೀಟೂ ಅಭಿಯಾನಗಳು ಒಂದೊಂದೇ ಹೊರಗೆ ಬರುತ್ತಿದ್ದಂತೆಯೇ ಈಗ ಕನ್ನಡ ಚಿತ್ರರಂಗ ಸ್ಟಾರ್ ನಟರೂ ತಲೆಯ ಮೇಲೆ ಕಲ್ಲುಬಿದ್ದಂತೆ ಬುಸುಗುಡುತ್ತಿದ್ದಾರೆ. ಕನ್ನಡ ಚಿತ್ರರಂಗ ಸೇರಿ ದೇಶದಲ್ಲಿ ಚಿತ್ರರಂಗದಲ್ಲಿರುವ ಬಹುದೊಡ್ಡ ಆರೋಪವೆಂದರೆ ಅದು ಪಾತ್ರ ನೀಡಲು ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಪಲ್ಲಂಗಕ್ಕೆ (ಅವರೊಂದಿಗೆ ಮಲಗುವಂತೆ) ಕೇಳುತ್ತಾರೆ ಎನ್ನುವುದು. ಕನ್ನಡ ಚಿತ್ರರಂಗವೂ ಇದರಿಂದ ಹೊರತಾಗಿಲ್ಲ. ಕನ್ನಡದಲ್ಲಿ ತೆರೆಮರೆಯ ಹಿಂದೆ ಈ ರೀತಿ ಹಲವು ಕರಾಳ ಸತ್ಯಗಳು ಅಡಗಿವೆ.