Breaking News

ಅಂಗಾಂಗ ಕಸಿಗೆ ಹೆಚ್ಚಿನ ಬೇಡಿಕೆ: ಕೊರತೆ ನಿವಾರಿಸಲು ”ಆರ್ಗನ್ ಡೋನರ್ಸ್ ನೀತಿ” ಜಾರಿಗೆ ಸರಕಾರದ ಸಿದ್ಧತೆ

Spread the love

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ಕಸಿಗೆ ಸಾವಿರಾರು ಜನ ರೋಗಿಗಳು ಹಲವಾರು ವರ್ಷಗಳಿಂದ ಕಾಯತೊಡಗಿದ್ದು, ಸಾರ್ವಜನಿಕರಲ್ಲಿ ಅಂಗಾಂಗ ದಾನ ವನ್ನು ಪ್ರೇರೇಪಿಸಲು ”ಆರ್ಗನ್ ಡೋನರ್ಸ್ ನೀತಿ” ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು ಅದಕ್ಕಾಗಿ ರೂಪುರೇಷೆ ಅಂತಿಮಗೊಳಿಸುತ್ತಿದೆ.

 

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​, ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಸಣ್ಣ ಕರಳು, ಕಾರ್ನಿಯಾ ಸೇರಿದಂತೆ ಜೀವ ರಕ್ಷಕ ಅಂಗಾಂಗಳ ಕಸಿಗಾಗಿ ರಾಜ್ಯದಲ್ಲಿ ಸುಮಾರು 8000 ರೋಗಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿ ಕಾಯತೊಡಗಿದ್ದು ಅಂಗಾಂಗಗಳನ್ನ ದಾನ ಮಾಡುವವರ ಕೊರತೆಯಿಂದಾಗಿ ಸಕಾಲಕ್ಕೆ ಸರಿಯಾಗಿ ಅಂಗಾಂಗಳು ಲಭ್ಯವಿಲ್ಲದೇ ರೋಗಿಗಳು ಹೆಚ್ಚಿನ ರೀತಿಯಲ್ಲಿ ಬಳಲತೊಡಗಿದ್ದಾರೆ. ಅಂಗಾಂಗ ದಾನವನ್ನು ಉತ್ತೇಜಿಸಲು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರ ಪ್ರತ್ಯೇಕವಾದ ಅಂಗಾಂಗ ದಾನ ಪಾಲಿಸಿಯನ್ನ ಜಾರಿಗೆ ತರಲು ಹೆಚ್ಚು ಉತ್ಸುಕವಾಗಿದೆ. ಅದಕ್ಕಾಗಿ ಆರ್ಗನ್ ಡೋನರ್ಸ್ ನೀತಿಯಲ್ಲಿ ಯಾವ ಯಾವ ಅಂಶಗಳನ್ನ ಸೇರಿಸಬೇಕೆನ್ನುವುದರ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

 ಅಂಗಾಂಗ್​ ಡೋನರ್ಸ್​ ಕ್ಯೂ ಆರ್ ಕೋಡ್ಅಂಗಾಂಗ ದಾನದ ನೀತಿ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಅಂಗಾಂಗ ದಾನ ಮಾಡುವ ವ್ಯಕ್ತಿಗಳ ಕುಟುಂಬದವರನ್ನ ಸರಕಾರದಿಂದ ಸತ್ಕರಿಸುವ, ಅಂಗಾಂಗ ದಾನ ಮಾಡಿದ ವ್ಯಕ್ತಿಗಳು ಮೃತಪಟ್ಟಾಗ ಅವರ ಅಂತ್ಯಕ್ರಿಯೆಯನ್ನು ಸರಕಾರಿ ಗೌರವಗಳೊಂದಿಗೆ ನಡೆಸುವ ಸಾಧ್ಯತೆಗಳ ಬಗ್ಗೆ ಗಂಭೀರ ಪರಿಶೀಲನೆಯನ್ನ ಆರೋಗ್ಯ ಇಲಾಖೆ ನಡೆಸತೊಡಗಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರತ್ಯೇಕ ಕ್ಯೂ ಆರ್ ಕೋಡ್​: ರಾಜ್ಯದಲ್ಲಿ ಅಂಗಾಂಗ ದಾನ ಮಾಡುವವರಿಗಾಗಿ ಪ್ರತ್ಯೇಕ ಕ್ಯೂ ಆರ್ ಕೋಡ್ ​ಅನ್ನು ಸರಕಾರ ರಚಿಸಿದೆ. ಅಂಗಾಂಗ ದಾನಕ್ಕೆ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವವರಿಗೆ ಸರಕಾರದಿಂದ ಪ್ರಮಾಣ ಪತ್ರವನ್ನ ನೀಡಲಾಗುತ್ತದೆ. ಅಂಗಾಂಗ ದಾನಕ್ಕೆ ಸಾರ್ವಜನಿಕರನ್ನು ಉತ್ತೇಜಿಸುವ ಉದ್ದೇಶದಿಂದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಅಂಗಾಂಗ ದಾನಕ್ಕೆ ತಮ್ಮ ಹೆಸರನ್ನ ನೋಂದಣಿ ಮಾಡಿದ್ದಾರೆ. ಆ ಮೂಲಕ ಸಾರ್ವಜನಿಕರೂ ಸಹ ಅಂಗಾಂಗ ದಾನಕ್ಕೆ ಉತ್ಸುಕತೆ ತೋರಲಿ ಎನ್ನುವ ಉದ್ದೇಶ ಇದರ ಹಿಂದಿದೆ.

ಮಾನವ ಅಂಗಾಂಗಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಬೇಡಿಕೆಯಿದ್ದರೆ ಅಂಗಾಂಗ ದಾನಕ್ಕೆ ನೋಂದಣಿ ಮಾಡುವವರ ಪ್ರಮಾಣ ಬೆರಳೆಣಿಕೆಯಷ್ಟಿದೆ. ರಾಜ್ಯದಲ್ಲಿ ಈ ವರ್ಷ ಹೆಚ್ಚಿನ ಜಾಗೃತಿ ನಂತರ ಈ ವರ್ಷದ ಜುಲೈ ಅಂತ್ಯಕ್ಕೆ ಒಟ್ಟು 104 ಜನ, ಕಳೆದ ವರ್ಷ 2022 ರಲ್ಲಿ 151 ಜನ, 2021 ರಲ್ಲಿ 70 ಜನ, 2020 ರಲ್ಲಿ 35 ಜನ, 2019ರಲ್ಲಿ 105 ಜನ, 2018ರಲ್ಲಿ 89 ಜನ ಅಂಗಾಂಗ ದಾನ ಮಾಡಿದ್ದಾರೆ ಎಂದು ಆರೋಗ್ಯ ಇಲಾಖೆ ದಾಖಲೆಗಳು ಹೇಳುತ್ತವೆ. ದೇಶದಲ್ಲಿ 3 ಲಕ್ಷ ರೋಗಿಗಳು ಕಿಡ್ನಿ ಕಸಿಗೆ ಕಾಯುತ್ತಿದ್ದಾರೆ. ಆದರೆ ಕಿಡ್ನಿ ಕಸಿಯಾಗಿರುವುದು ಕೇವಲ 10 ಸಾವಿರ ಜನರಿಗೆ ಮಾತ್ರ.

ಒಬ್ಬ ವ್ಯಕ್ತಿ ತನ್ನ ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಸಣ್ಣ ಕರಳು ಸೇರಿದಂತೆ ಇತರ ಅಂಗಾಂಗ ದಾನ ಮಾಡುವ ಮೂಲಕ 8 ಜನರ ಜೀವಗಳನ್ನು ಉಳಿಸಬಹುದಾಗಿದೆ. ಅದೇ ರೀತಿ ಚರ್ಮ, ಮೂಳೆ, ಹೃದಯ ಕವಾಟುಗಳು, ಕಣ್ಣುಗಳು, ಅಸ್ಥಿರಜ್ಜುಗಳಾದ ಅಂಗಾಂಶಗಳನ್ನು ದಾನ ಮಾಡುವ ಮೂಲಕ 50ಕ್ಕೂ ಹೆಚ್ಚು ಜನರ ಜೀವ ಉಳಿಸಬಹುದಾಗಿದೆ.

ಅಂಗಾಂಗ ಕೊರತೆ ನಿವಾರಣೆಗೆ ರಾಜ್ಯ ಸರಕಾರ ನಿಮಾನ್ಸ್ ಸೇರಿದಂತೆ ಸರಕಾರಿ ವೈದ್ಯಕೀಯ ಕಾಲೇಜು ಹಾಗು ಜಿಲ್ಲಾ ಆಸ್ಪತ್ರೆಗಳಲ್ಲಿ ಕಸಿ ಮಾಡದ ಮಾನವ ಅಂಗಾಂಗ ಹಿಂಪಡೆಯುವಿಕೆ ಕೇಂದ್ರವನ್ನು ಸ್ಥಾಪಿಸಿದೆ. ಈ ಕೇಂದ್ರಗಳಲ್ಲಿ ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಶರೀರದಿಂದ ಅಂಗಾಂಗಗಳನ್ನು ಹೊರತೆಗೆದು ಕಸಿ ಕೇಂದ್ರಗಳಿಗೆ ಹಸ್ತಾಂತರಿಸಲಾಗುತ್ತದೆ. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಕುಟುಂಬದವರ ಮನವೋಲಿಸಿ ಅಂಗಾಂಗ ದಾನಕ್ಕೆ ಪ್ರೇರೇಪಣೆ ನೀಡಲು ವೈದ್ಯರುಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ.

ರಕ್ತದಾನ, ನೇತ್ರದಾನಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಗಾಂಗ ದಾನ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅಂಗಾಂಗ ದಾನ ಮಾಡುವವರ ಹೆಸರು ನೋಂದಣಿ ಮತ್ತು ಅಂಗಾಂಗ ದಾನ ಅಗತ್ಯವಿರುವವರನ್ನು ಗುರುತಿಸಲು ರಾಜ್ಯದಲ್ಲಿ ಕರ್ನಾಟಕ ಕಸಿ ಪ್ರಾಧಿಕಾರ ”ಜೀವನ ಸಾರ್ಥಕತೆ” ಸಂಸ್ಥೆಯನ್ನು 2017ರಲ್ಲಿ ಆರಂಭಿಸಲಾಗಿದ್ದು, ಈ ಸಂಸ್ಥೆಗೆ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ( SOTTO ) ಹೆಸರನ್ನ ಮರು ನಾಮಕರಣ ಮಾಡಲಾಗಿದೆ.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ