ರಸ್ತೆ ದುರಸ್ತಿಗೆ ರೋಡ್ನಲ್ಲಿ ಹೋಮ: ಈಗಲೂ ಸರಿಪಡಿಸದಿದ್ದರೆ ಮತ್ತೊಂದು ಪ್ರತಿಭಟನೆ
ಹಾವೇರಿ: ರಾಣೆಬೆನ್ನೂರಿನ ಗೌರಿಶಂಕರ್ ನಗರದ 2ನೇ ಹಂತ 1ನೇ ಕ್ರಾಸ್ ರಸ್ತೆ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಆಗ್ರಹಿಸಿ ರೈತ ಸಂಘಟನೆ ಹಾಗೂ ಸ್ಥಳೀಯರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ರಾಣೆಬೆನ್ನೂರಿನ ಗೌರಿಶಂಕರ ನಗರದಲ್ಲಿ ಎರಡನೇ ಹಂತ, ಮೊದಲನೇ ಕ್ರಾಸ್ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ರೋಡ್ನಲ್ಲಿ ಹೋಮ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಅವಧಿಯಲ್ಲಿ ರಸ್ತೆ ದುರಸ್ತಿಗೆ ಚಾಲನೆ ನೀಡಲಾಗಿತ್ತು. ಆದರೆ, ಹಾಲಿ ಶಾಸಕ ಪ್ರಕಾಶ್ ಕೋಳಿವಾಡ ನಾನು ರಸ್ತೆ ದುರಸ್ತಿ ಮಾಡಿಸಲ್ಲ ಅಂತಿದ್ದಾರೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.
ರಸ್ತೆ ಅಗೆದು 2 ವರ್ಷ ಕಳೆದರೂ ಡಾಂಬರೀಕರಣವಾಗಿಲ್ಲ. ರಸ್ತೆ ದುರಸ್ತಿ ಮಾಡಲು ಆಗ್ರಹಿಸಿದರೂ ರಾಣೆಬೆನ್ನೂರು ನಗರಸಭೆ, ಶಾಸಕರು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ರಸ್ತೆ ಸರಿಪಡಿಸಲು ಆಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಇದರಿಂದಲಾದರೂ ರಸ್ತೆ ಕಾಮಗಾರಿ ಕೈಗೊಂಡು ರಸ್ತೆ ಸರಿಪಡಿಸುತ್ತಾರೋ, ಇಲ್ಲದಿದ್ದರೆ ಮತ್ತೆ ಬೇರೆ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬೂರ್ ಮಾತನಾಡಿ, ಉತ್ತರ ಕರ್ನಾಟಕದ ಹೆಬ್ಬಾಗಿಲು, ವಾಣಿಜ್ಯ ನಗರವೆಂದೇ ಪ್ರಖ್ಯಾತವಾದ ನಗರ ರಾಣೆಬೆನ್ನೂರಿನಲ್ಲಿ ಗೌರಿಶಂಕರ ಓಣಿ ಹದಗೆಟ್ಟು ಎರಡೂವರೆ ವರ್ಷವಾಯಿತು. ಇವತ್ತು ಇದು ಡಬಲ್ ರೋಡ್. ಸಾರ್ವಜನಿಕರು, ಪ್ರಜ್ಞಾವಂತರು ಇರುವಂತಹ ಏರಿಯಾವಿದು. ಇಲ್ಲಿ ದಿನನಿತ್ಯ ನರಕತಯಾತನೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಾಕಷ್ಟು ಜನ ಬಿದ್ದು ಗಾಯಗೊಂಡಿದ್ದಾರೆ. ಬಿಜೆಪಿ ಸರಕಾರದಲ್ಲಿ ಇದನ್ನು ಸರಿಮಾಡುತ್ತೇವೆ ಎಂದು ಕಿತ್ತು ಹಾಕಿದರು. ಈಗ ಕಾಂಗ್ರೆಸ್ ಸರಕಾರ ಬಂದಿದೆ. ಆದರೆ, ಇಬ್ಬರೂ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಕೂಡಲೇ ಇದನ್ನು ಅಭಿವೃದ್ಧಿಪಡಿಸಬೇಕು ಎಂದು ಹೋಮ ಮಾಡಿ ಈ ಪ್ರತಿಭಟನೆ ನಡೆಸಿದ್ದೇವೆ ಎಂದರು.
ರೈತ ಮುಖಂಡ ಚೆನ್ನಬಸನಗೌಡ ಮಾತನಾಡಿ, “ಹಾವೇರಿ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುವಂತ ನಗರಗಳಲ್ಲಿ ರಾಣೆಬೆನ್ನೂರು ಒಂದು ಎಂದು ಹೇಳಲು ಇಷ್ಟಪಡುತ್ತೇನೆ. ಈ ನಗರಕ್ಕೆ ಸಾಕಷ್ಟು ಬಾರಿ ಅನುದಾನ ಬಂದಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬುದು ನಮ್ಮ ದೂರು. ಹೀಗಾಗಿ ನಾವು ವಿನೂತನವಾಗಿ ಹೋಮದಂತ ರೀತಿಯಲ್ಲಿ ರಸ್ತೆ ದುರಸ್ತಿಗೆ ಪ್ರತಿಭಟನೆ ನಡೆಸಿದ್ದೇವೆ. ರಾಣೆಬೆನ್ನೂರಿನ ಹೃದಯಭಾಗದಲ್ಲಿನ ಗೌರಿಶಂಕರ ದೇವಾಲಯದ ಭಾಗದಲ್ಲಿ ಇರುವಂತ ರಸ್ತೆಯನ್ನು ಕೆದರಿ ಹಾಕಿ 2 ವರ್ಷ ಕಳೆದಿದೆ. ಈ ಎರಡು ವರ್ಷದ ಕಾಲದಲ್ಲಿ ಇದು ಭತ್ತದ ಗದ್ದೆಯಾ, ಕಬ್ಬಿನ ಗದ್ದೆಯಾ ಎಂದು ತಿಳಿಯದ ಮಟ್ಟಿಗೆ ಇದರ ಪರಿಸ್ಥಿತಿ ಬಂದಿದೆ. ಆ ಹಂತದಲ್ಲಿ ಗುಂಡಿಗಳು ಬಿದ್ದು ರಸ್ತೆಯಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆದಿದೆ. ಮಕ್ಕಳು, ವಯಸ್ಸಾದಂತವರು ಬಿದ್ದಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ತಾರತಮ್ಯ ಮಾಡದೇ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಾಗಿ ನಮ್ಮ ಮನವಿ” ಎಂದರು.
Laxmi News 24×7