ಮಂಗಳೂರು: ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತ ರೋಗಿಗಳ ನೆರವಿಗಾಗಿ ಜೀವ ರಕ್ಷಕ ಸಾಧನವೊಂದನ್ನು ಮಂಗಳೂರಿನ ವೈದ್ಯರ ತಂಡ ಅವಿಷ್ಕಾರಿಸಿದೆ.
ನಗರದ ಮಂಗಳಾ ಹಾಸ್ಪಿಟಲ್ನ ಮೆಡಿಕಲ್ ಡೈರೆಕ್ಟರ್ ಡಾ.ಗಣಪತಿ ಅವರ ತಂಡ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ನ್ನು ರೆಡಿ ಮಾಡಿದೆ. ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡಬೇಕಾದ ರೋಗಿಗಳಿಗೆ ಈ ಸಾಧನ ಬಹಳಷ್ಟು ಉಪಯೋಗಕಾರಿಯಾಗಲಿದೆ. ಕೊರೊನಾ ಸೋಂಕಿನಿಂದ ರೋಗಿಯ ಆರೋಗ್ಯ ಸ್ಥಿತಿ ಗಂಭೀರ ಆಗಿ ಉಸಿರಾಟ ಸಮಸ್ಯೆ ಎದುರಾದಾಗ ಕೃತಕ ಉಸಿರಾಟದ ವ್ಯವಸ್ಧೆ ಮಾಡಬೇಕಾಗುತ್ತದೆ. ಈ ಸಂದರ್ಭ ಶ್ವಾಸನಾಳಕ್ಕೆ ಟ್ಯೂಬ್ ಹಾಕಿ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ. ಆದರೆ ಈ ರೀತಿ ಮಾಡಿದ ಪ್ರಕರಣದಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ. ಇದಕ್ಕಾಗಿ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ ಬಳಕೆ ಮಾಡಿದರೆ ರೋಗಿ ಚೇತರಿಕೆಗೆ ಹೆಚ್ಚು ಸಹಕಾರಿಯಾಗಲಿದೆ ಎಂಬುವುದು ವೈದ್ಯರ ಮಾತು.
ಶ್ವಾಸನಾಳಕ್ಕೆ ಟ್ಯೂಬ್ ಅಳವಡಿಸುವ ಬದಲು ಬಬ್ಬಲ್ ಹೆಲ್ಮೆಟ್ ಒಳಗೆ ಆಕ್ಸಿಜನ್ ಸಪ್ಲೈ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ಹೊರಗೆ ಹೋಗದಾಗೆ ರಬ್ಬರ್ ಶೀಟ್ನ್ನು ಹೆಲ್ಮೆಟ್ನಲ್ಲಿ ಅಳವಡಿಸಲಾಗಿದೆ. ವಿದೇಶಗಳಲ್ಲಿ ಇದು ಬಳಕೆಯಲ್ಲಿದ್ದು, ಆದರೆ ಇದೀಗ ಅಲ್ಲಿಂದ ಅಮದು ಮಾಡಿ ಭಾರತಕ್ಕೆ ತರಿಸುವುದು ಕಷ್ಟಸಾಧ್ಯ. ಆದ್ದರಿಂದ ಅದೇ ಮಾಡೆಲ್ನ್ನು ಇಟ್ಟುಕೊಂಡು ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ವೈದ್ಯರ ತಂಡ ಸಾಧನವನ್ನು ಸಿದ್ಧಪಡಿಸಿದೆ.
ಬಬ್ಬಲ್ ಹೆಲ್ಮೆಟ್ನಲ್ಲಿ ರೋಗಿಗೆ ಸುಲಭವಾಗಿ ಉಸಿರಾಡಬಹುದು. ಕೊರೊನಾ ರೋಗಿಯಿಂದ ಐಸಿಯುನಲ್ಲಿರುವ ಇತರ ರೋಗಿಗಳಿಗೆ, ಚಿಕಿತ್ಸೆ ನೀಡುವ ವೈದ್ಯರಿಗೆ, ದಾದಿಯರಿಗೆ ಸೋಂಕು ಹರಡುವ ಸಾಧ್ಯತೆಯೂ ತುಂಬಾ ಕಡಿಮೆಯಿದೆ. ಇದರ ಜೊತೆ ಈ ವೈದ್ಯರ ತಂಡ ಕೂಡ ಸ್ಮಾಕ್ಲಿಂಗ್ ಮಾಸ್ಕ್ ನ್ನು ಸಹ ಕೃತಕ ಉಸಿರಾಟ ವ್ಯವಸ್ಥೆಗೆ ಬಳಸುವಂತೆ ಸಿದ್ಧಪಡಿಸಿದ್ದಾರೆ. ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ರಕ್ಷಾ ಕವಚ ಸುಮಾರು 6 ಸಾವಿರ ರೂ.ಗೆ ಲಭ್ಯವಾಗಲಿದೆ. ಈಗಾಗಲೇ ಸದ್ಯದ ಸ್ಥಿತಿಯಲ್ಲಿ ಇವುಗಳ ಅಗತ್ಯವಿರುವ ಕಾರಣ ವೈದರ ತಂಡ ಹೆಚ್ಚಿನ ಸಂಖ್ಯೆಯಲ್ಲಿ ಇವುಗಳನ್ನು ತಯಾರಿ ಮಾಡುತ್ತಿರುವುದಾಗಿ ಬಬ್ಬಲ್ ಹೆಲ್ಮೆಟ್ ತಯಾರಕ ಕೃಷ್ಣದಾಸ್ ಕಾಮತ್ ತಿಳಿಸಿದ್ದಾರೆ.