ಚಾಮರಾಜನಗರ: ನಿನ್ನೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದ ಬಗ್ಗೆ ಹಾಗೂ 20ಕ್ಕೂ ಅಧಿಕ ಕೊರೊನಾ ರೋಗಿಗಳು ಮೃತಪಟ್ಟ ಹಿನ್ನೆಲೆ ವಿಚಾರಣಾಧಿಕಾರಿ ಶಿವಯೋಗಿ ಕಳಸದ್ ಇಂದಿನಿಂದ ತನಿಖೆ ಆರಂಭಿಸಿದ್ದಾರೆ.
ಇಂದು ಕಳಸದ್ ಜಿಲ್ಲಾಸ್ಪತ್ರೆಗೆ ಹಾಗೂ ಆಕ್ಸಿಜನ್ ಪ್ಲಾಂಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆಗೆ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದರು. ಆಕ್ಸಿಜನ್ ಪ್ಲಾಂಟ್ ಸಾಮರ್ಥ್ಯ ಹಾಗೂ ಆಕ್ಸಿಜನ್ ಪೂರೈಕೆ ಬಗ್ಗೆ ಜಿಲ್ಲಾಸ್ಪತ್ರೆ ಡೀನ್ರಿಂದ ಮಾಹಿತಿ ಕೇಳಿದ್ರು. ಇದೇ ವೇಳೆ ಜಂಬೋ ಸಿಲಿಂಡರ್ ಕೌಂಟರ್ಗೆ ತೆರಳಿ ಮಾಹಿತಿ ಕಲೆ ಹಾಕಿದ್ರು. ಒಂದು ಸಿಲಿಂಡರ್ನಲ್ಲಿ ಎಷ್ಟು ನಿಮಿಷ ಆಕ್ಸಿಜನ್ ಪೂರೈಕೆಯಾಗುತ್ತೆ, ಎಷ್ಟು ಸೋಂಕಿತರಿಗೆ ಆಕ್ಸಿಜನ್ ಪೂರೈಕೆಯಾಗುತ್ತೆ ಎಂದು ವೈದ್ಯರಿಂದ ಡೀಟೇಲ್ಸ್ ಪಡೆದರು.
ರೋಗಿಗಳಿಂದೊಂದಿಗೆ ಸಮಾಲೋಚನೆ ನಡೆಸಿ, ಕೋವಿಡ್ ಟೆಸ್ಟ್ಗೆ ಯಾಕೆ ಬಂದಿದ್ದೀರಿ? ರೋಗ ಲಕ್ಷಣ ಇದೆಯಾ ಅಥವಾ ಕುಟುಂಬಸ್ಥರಿಗೆ ಕೋವಿಡ್ ಬಂದಿದೆಯಾ ಎಂದು ಕೇಳಿ ತಿಳಿದುಕೊಂಡರು. ಸುಮಾರು ಹದಿನೈದು ನಿಮಿಷ ಜಿಲ್ಲಾಸ್ಪತ್ರೆ ರೌಂಡ್ಸ್ ಹಾಕಿದ ಕಳಸದ್, ಇನ್ನಿತರ ಮಾಹಿತಿ ಪಡೆಯಲು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.