ದಾವಣಗೆರೆ: ರಾಜಕೀಯ ಸಮಾವೇಶಗಳಲ್ಲಿ ಸಾವಿರಾರು ಜನ ಸೇರ್ತಾರೆ. ಅದಕ್ಕೆ ನಿರ್ಬಂಧ ಇಲ್ಲ. ಎಲ್ಲೂ ಇಲ್ಲದ ನಿಯಮಗಳು ಸಿನಿಮಾ ಥಿಯೇಟರ್ಗೆ ಏಕೆ ಎಂದು ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಪ್ರಶ್ನಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹರಿಹರದ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಥಿಯೇಟರ್ಗಳಿಗೆ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಎಂಬ ಸರ್ಕಾರದ ಅದೇಶಕ್ಕೆ ಪ್ರತಿಕ್ರಿಯಿಸಿದರು. ಅಲ್ಲದೆ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಎಲ್ಲೂ ಇಲ್ಲದ ನಿಯಮಗಳು ಸಿನಿಮಾ ಥಿಯೇಟರ್ಗೆ ಏಕೆ ಎಂದು ಪ್ರಶ್ನಿಸಿದ ಅವರು, ರಾಜಕೀಯ ಸಮಾವೇಶಗಳಲ್ಲಿ ಸಾವಿರಾರು ಜನ ಸೇರ್ತಾರೆ, ಆದರೆ ಅದಕ್ಕೆ ನಿರ್ಬಂಧ ಇಲ್ಲ. ಪುನೀತ್ ರಾಜಕುಮಾರ್ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಎರಡು ದಿನ ಮೊದಲು ಹೇಳಿದ್ದರೆ ಅವರು ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ. ಬಿಗ್ ಬಜೆಟ್ ಗಳ ಸಿನಿಮಾಗಳಿಗೆ ಈ ರೀತಿ ಆದ್ರೆ ಸಿನಿಮಾ ಇಂಡಸ್ಟ್ರಿ ಉಳಿಯುವುದು ಹೇಗೆ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಪುನಿತ್ ಸಿನಿಮಾ ನೋಡಲು ಫ್ಯಾಮಿಲಿ ಗಳು ಬರ್ತಾ ಇದೆ. ದಯವಿಟ್ಟು ಟಫ್ ರೂಲ್ಸ್ಗಳನ್ನು ಸಡಿಲಿಸಿ ಎಂದು ವಿಜಿ ಸರ್ಕಾರಕ್ಕೆ ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಪುನೀತ್ ಅವರು ಸರ್ಕಾರಕ್ಕೆ ನಿಧಿ ನೀಡಿದರು. ಅದಕ್ಕೆ ಅಂತ ನಾವು ಕೇಳ್ತಾ ಇಲ್ಲ, ಕನ್ನಡ ಸಿನಿಮಾ ರಂಗ ಉಳಿಯಲು ಕೇಳುತ್ತಿದ್ದೇವೆ ಎಂದರು.
ಎಲ್ಲಾ ಮಠಗಳ ಮೇಲೆ ಅಭಿಮಾನ ಇದೆ. ನಾನು ಒಂದು ಸಮುದಾಯಕ್ಕೆ ಸೇರಿಲ್ಲ. ನನಗೆ ಎಲ್ಲಿ ಹೋಗಬೇಕು ಅನ್ನಿಸುತ್ತೋ ಅಲ್ಲಿ ಹೋಗುತ್ತೇನೆ. ‘ದುನಿಯಾ’ವನ್ನು ಎಲ್ಲಾ ಜಾತಿ ಧರ್ಮದವರು ನೋಡಿ ಬೆಳೆಸಿದ್ದೀರಿ ಎಂದು ಇದೇ ವೇಳೆ ವಿಜಯ್ ಹೇಳಿದರು.