ಯಾದಗಿರಿ : ಶೇಂಗಾ ಬೆಳೆದ ಜಿಲ್ಲೆಯ ರೈತರು ಉತ್ತಮ ದರ ಸಿಗದೆ ಪರದಾಡುವಂತಾಗಿದೆ.ನಿ ತ್ಯವೂ ಸಾವಿರಾರು ಕ್ವಿಂಟಾಲ್ ಶೇಂಗಾವನ್ನು ಹತ್ತಿಕುಣಿ, ಗುರುಮಠಕಲ್, ಬಂದಳ್ಳಿ,ಅರಕೇರಾ ಕೆ ಹಾಗೂ ಇನ್ನಿತರ ಭಾಗದಿಂದ ಹೊತ್ತು ತಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಕಡಿಮೆ ದರಕ್ಕೆ ಶೇಂಗಾ ಖರೀದಿ ಮಾಡುತ್ತಿದ್ದಾರೆ. ಉತ್ತಮ ಬೆಲೆ ಸಿಗದೆ, ಸಿಕ್ಕ ಹಣಕ್ಕೆ ರೈತರು ಶೇಂಗಾ ಮಾರಾಟ ಮಾಡುತ್ತಿದ್ದಾರೆ. ಯಾದಗಿರಿ, ಸುರಪುರ, ಶಹಾಪುರ, ವಡಗೇರಾ, ಗುರುಮಠಕಲ್, ಹುಣಸಗಿ, ಹತ್ತಿಕುಣಿ, ಸೈದಾಪುರ ಹಾಗೂ ಮೊದಲಾದ ಕಡೆ ರೈತರು ಶೇಂಗಾ ಬೆಳೆ ಬೆಳೆದಿದ್ದಾರೆ. ಉತ್ತಮ ಬೆಳೆ ಬೆಳೆದ ರೈತರು ಉತ್ತಮ ದರ ನಿರೀಕ್ಷೆಯಲ್ಲಿದ್ದರು. ಆದರೆ, ದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಶೇಂಗಾಗೆ 5 ಸಾವಿರದಿಂದ 6 ಸಾವಿರ ರೂ ವರಗೆ ದರ ನಿಗದಿಸಿ ಖರೀದಿ ಮಾಡುತ್ತಿದ್ದಾರೆ. ಶೇಂಗಾ ಬೆಳೆ ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ರೈತರು ಹಣ ಖರ್ಚು ಮಾಡಿದ್ದಾರೆ. ಆದರೆ, ಆದಾಯ ಮಾತ್ರ ಇಳಿಮುಖವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯಪುರ, ಚಿತ್ರದುರ್ಗ ಹಾಗೂ ಮೊದಲಾದ ಕಡೆಯಿಂದ ದಲ್ಲಾಳಿಗಳು ಆಗಮಿಸಿ ಕಡಿಮೆ ದರಕ್ಕೆ ಶೇಂಗಾ ಖರೀದಿ ಮಾಡುತ್ತಿದ್ದಾರೆ. ಸಾಕಷ್ಟು ಹಣ ವ್ಯಯಿಸಿ ಶೇಂಗಾ ಬೆಳೆಯಲಾಗಿದೆ. ಆದರೆ ಈಗ ಮಾರುಕಟ್ಟೆಯಲ್ಲಿ ಮಾತ್ರ ಶೇಂಗಾ ಕಡಿಮೆ ದರಕ್ಕೆ ಪಡೆಯುತ್ತಿದ್ದಾರೆ. ಇದರಿಂದ ಬಹಳ ನಷ್ಟವಾಗುತ್ತಿದೆ. ಈ ಹಿನ್ನಲೆ ಸರಕಾರವೇ ಖರೀದಿ ಕೇಂದ್ರ ಆರಂಭ ಮಾಡಬೇಕು. ಜೊತೆಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಿ, ಶೇಂಗಾ ಖರೀದಿ ಮಾಡಿ ನಮ್ಮನ್ನು ಕಾಪಾಡ ಬೇಕೆಂದರು.