ಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ತನ್ನ ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ ಹಾಗೂ ವ್ಯಕ್ತಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಗುಂಡಿಮಾಳ ಗ್ರಾಮದ ನಂದಿನಿ ಹಾಗೂ ಈತನ ಪ್ರಿಯಕರ ದಿನಕರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ರಾಜಶೇಖರ್ ಎಂಬಾತನ ಪತ್ನಿ ನಂದಿನಿಯು ದಿನಕರ್ ಎಂಬಾತನ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಳು. ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಿದ್ದರೂ ಸಂಬಂಧ ಮುಂದುವರೆಸಿದ್ದರು.
ನ್ಯಾಯಾಲಯದ ಆದೇಶದ ವಿವರ: 2021ರ ಜೂನ್ 23ರಂದು ರಾಜಶೇಖರ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನಂದಿನಿ ಬಳಿ ಪ್ರಿಯಕರ ದಿನಕರ ಬಂದಿದ್ದ. ಆದರೆ, ಸ್ವಲ್ಪ ಸಮಯದ ನಂತರ ರಾಜಶೇಖರ್ ಮನೆಗೆ ಬಂದಾಗ ಇಬ್ಬರೂ ಜೊತೆಯಲ್ಲಿ ಇರುವುದನ್ನು ನೋಡಿ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಪತ್ನಿ ನಂದಿನಿ ಹಾಗೂ ಪ್ರಿಯಕರ ದಿನಕರ್ ಸೇರಿಕೊಂಡು ರಾಜಶೇಖರ್ ಕಣ್ಣಿಗೆ ಕಾರದಪುಡಿ ಎರಚಿ, ತಲೆಯ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಪತಿ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ತಕ್ಷಣ ಇಬ್ಬರೂ ಸೇರಿ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ಗುಂಡಿಯಲ್ಲಿ ತಲೆಕೆಳಗಾಗಿ ಶವವನ್ನು ಹಾಕಿ ತಕ್ಷಣ ಮುಚ್ಚಿದ್ದರು.
ಘಟನೆ ಸಂಬಂಧ ರಾಜಶೇಖರ್ ಅವರ ತಂದೆ, ತಾಯಿಗೆ ಕೆಲಸಕ್ಕೆ ಹೋಗಿರುವುದಾಗಿ ನಂಬಿಸಿದ್ದರು. ಅಲ್ಲದೆ, ಟಾಯ್ಲೆಟ್ ಗುಂಡಿಗೆ ಮಣ್ಣು ಹಾಕಿ ಮುಚ್ಚಿಸಿದ್ದರು. ಬಳಿಕ ರಾಜಶೇಖರ್ ಕಾಣೆಯಾಗಿರುವ ಬಗ್ಗೆ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಟಾಯ್ಲೆಟ್ ಗುಂಡಿಯ ಸುತ್ತ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ, ಗ್ರಾಮಸ್ಥರ ಎದುರಲ್ಲಿ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಎಫ್ಎಸ್ಎಲ್ ವರದಿಯಲ್ಲಿ ಉಸಿರುಗಟ್ಟಿ ರಾಜಶೇಖರ್ ಅಸುನೀಗಿರುವುದು ದೃಢವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್ ಅವರು, ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆ ನಂದಿನಿ ಹಾಗೂ ದಿನಕರ್ಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿ.ಬಿ.ಗಿರೀಶ್ ವಾದ ಮಂಡಿಸಿದ್ದರು.
Laxmi News 24×7