ಬೆಂಗಳೂರು: ಆ್ಯಪ್ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ಆಟೊ ಚಾಲಕನನ್ನ ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೂರಿನಲ್ಲಿ ಇರುವುದೇನು?- ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು : ಈಶಾನ್ಯ ಭಾರತದ ಮೂಲದ ಯುವತಿ ನೀಡಿದ ದೂರಿನ ಮೇರೆಗೆ ಆಟೊ ಚಾಲಕ ಪವನ್ (21) ಎಂಬುವನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನಲ್ಲಿ ಇರುವಂತೆ ಘಟನೆಯ ಹಿನ್ನೆಲೆ: ಕಳೆದ ಎರಡು ವರ್ಷಗಳಿಂದ ನಗರದ ಕ್ಯಾಲಸೇನಹಳ್ಳಿಯ ಹನುಮಂತಪ್ಪ ಬಡಾವಣೆಯಲ್ಲಿ ತಂಗಿಯೊಂದಿಗೆ ವಾಸವಾಗಿದ್ದೇನೆ. ಜೀವನಕ್ಕಾಗಿ ನಗರದ ಕಾಲ್ ಸೆಂಟರ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಅಕ್ಟೋಬರ್ 2ರ ಸಂಜೆ 7 ಗಂಟೆ ಸುಮಾರಿಗೆ ಕ್ಯಾಲಸೇನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಮೊಬೈಲ್ ಆ್ಯಪ್ ನಲ್ಲಿ ಆಟೋ ಬುಕ್ ಮಾಡಿಕೊಂಡಿದ್ದೆ. ಆದರೆ, ಆ್ಯಪ್ ನಲ್ಲಿ ಪಿಕಪ್ ಪಾಯಿಂಟ್ ತೋರಿಸಲಿರಲಿಲ್ಲ. ಆದಾಗ್ಯೂ ಐದಾರು ನಿಮಿಷಗಳ ಕಾದರೂ ಆಟೊ ಬರದ ಕಾರಣ ಆರ್ಡರ್ ರದ್ದು ಮಾಡಿ ಮತ್ತೊಂದು ಆಟೊ ಹಿಡಿದು ತೆರಳಿದ್ದೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ.
ಯುವತಿಯ ಆರೋಪ ಏನು?: ಕೆಲ ಹೊತ್ತಿನ ಬಳಿಕ ರದ್ದು ಮಾಡಿದ್ದ ಆಟೊ ಚಾಲಕ ಪವನ್ ನಾನು ಪ್ರಯಾಣಿಸುತ್ತಿದ್ದ ಮತ್ತೊಂದು ಆಟೋವನ್ನ ಹಿಂಬಾಲಿಸಿ ಅಡ್ಡಗಟ್ಟಿದ್ಧ. ಏಕಾಏಕಿ ಬಂದು ಯಾಕೆ ಕ್ಯಾನ್ಸಲ್ ಮಾಡಿದ್ದೆ ಎಂದು ಪ್ರಶ್ನಿಸಿ ಕನ್ನಡದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದ. ಈ ವೇಳೆ,ಮೊಬೈಲ್ ನಲ್ಲಿ ಆತ ವಿಡಿಯೊ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.
ಅಕ್ಟೋಬರ್ 8 ರಂದು ದೂರು ನೀಡಿದ್ದ ಯುವತಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯು ಅ.8ರಂದು ಕೊತ್ತನೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಚಾಲಕನನ್ನ ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಂಸ್ಥೆ: ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಉಬರ್ ಸಂಸ್ಥೆಯು, ಉಬರ್ ಪ್ರಯಾಣಿಕರೇ ಸುರಕ್ಷೆಯೇ ನಮ್ಮ ಮೊದಲ ಆದ್ಯತೆ. ಘಟನೆ ಸಂಬಂಧ ಕ್ಷಮೆ ಇರಲಿ. ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆಟೊ ಚಾಲಕನನ ಸಂಸ್ಥೆಯಿಂದ ಡಿ ಆ್ಯಕ್ಟಿವೇಟ್ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.