ಬೆಂಗಳೂರು: ರೈತರು ಉತ್ಪಾದಿಸುವ ಆಹಾರ ಧಾನ್ಯಗಳನ್ನು ಖರೀದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರ ಜವಾಬ್ದಾರಿಯನ್ನು ಭಾರತೀಯ ಆಹಾರ ನಿಗಮ (ಎಫ್ ಸಿಐ)ಗೆ ವಹಿಸುವುದು ಸೂಕ್ತ ಎಂದು ಭಾರತೀಯ ಆಹಾರ ನಿಗಮ (ಎಫ್ಸಿಐ) ರಾಜ್ಯ ಘಟಕದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಭಾರತೀಯ ಆಹಾರ ನಿಗಮವು ಕರ್ನಾಟಕದಲ್ಲಿ ನಿರ್ವಹಿಸಿರುವ ಕಾರ್ಯಗಳ ಬಗ್ಗೆ ಕಾಡುಗೋಡಿಯಲ್ಲಿರುವ ಎಫ್ಸಿಐನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಡಾಡಿ ಅವರು, ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಕೇಂದ್ರ ಸರ್ಕಾರ ಹಲವು ಆಹಾರ ಧಾನ್ಯಗಳನ್ನು ಖರೀದಿಸಲು ಅವಕಾಶ ಕೊಡಲಾಗಿದೆ.2012 ರಿಂದಲೂ ಖರೀದಿ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಉದಾಹರಣೆಗೆ, ಕಳೆದ ವರ್ಷ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಗುರಿ ಇಟ್ಟುಕೊಂಡಿದ್ದರು. ಆದರೆ, 3.44 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದೆ. ಜೋಳ 2 ಲಕ್ಷ ಮೆಟ್ರಿಕ್ ಟನ್ ಗುರಿ ಇದ್ದರೆ, 1.75 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದೆ. ಅಕ್ಕಿ 5 ಲಕ್ಷ ಮೆಟ್ರಿಕ್ ಟನ್ ಗುರಿ ಇಟ್ಟುಕೊಂಡಿದ್ದರೆ, ಕೇವಲ 510 ಮೆಟ್ರಿಕ್ ಟನ್ ಖರೀದಿಸಲಾಗಿದೆ. ಸರಿಯಾದ ಖರೀದಿ ವ್ಯವಸ್ಥೆ ಆಗಲಿಲ್ಲವೆಂದರೆ ಎಫ್ಸಿಐಗೆ ವಹಿಸಲು ರಾಜ್ಯ ಆಹಾರ ಸಚಿವರು ಗಮನಹರಿಸಬೇಕು ಎಂದು ಹೇಳಿದರು.