ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕಳೆದ ಶನಿವಾರದಿಂದ ಮಳೆಯ ಆಗಮನವಾಗಿದೆ. ನದಿ ಹಳ್ಳಗಳು ಮತ್ತೆ ತುಂಬಿ ಹರಿಯಲು ಪ್ರಾರಂಭಿಸಿವೆ. ಜಗತ್ ಪ್ರಸಿದ್ಧ ಜೋಗ ಜಲಪಾತದಲ್ಲಿ ಮತ್ತೆ ಶರಾವತಿ ವೈಭವ ಕಣ್ತುಂಬಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ.
ಸಾಗರ ತಾಲೂಕಿನ ಶರಾವತಿ ನದಿ ಪಾತ್ರದಲ್ಲಿ ಮಳೆಯಾಗುತ್ತಿದ್ದು ಜೋಗ ಜಲಪಾತದಲ್ಲಿ ರಾಜ, ರಾಣಿ, ರೋರರ್, ರಾಕೆಟ್ ಮೂಲಕ ಶರಾವತಿ ಧುಮ್ಮುಕ್ಕುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜಲಪಾತ ಸಿರಿಯನ್ನು ನೋಡಲು ಪ್ರವಾಸಿಗರು ಜೋಗದತ್ತ ಆಗಮಿಸುತ್ತಿದ್ದಾರೆ. ಮಳೆಯಲ್ಲಿ ಜೋಗವನ್ನು ನೋಡುವುದೇ ಆನಂದ. ಜೋಗವನ್ನು ನೋಡಲು ಆಗ್ಗಾಗೆ ಮಂಜು ಅಡ್ಡಿ ಪಡಿಸಿದರು ಸಹ ಮಳೆರಾಯನ ಆಗಮನದಿಂದ ಜೋಗದ ಸಿರಿಯನ್ನು ನೋಡಬಹುದಾಗಿದೆ.
ಇನ್ನು ಶಿವಮೊಗ್ಗ ತಾಲೂಕು ಗಾಜನೂರಿನ ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಸುಮಾರು 31 ಸಾವಿರ ಕ್ಯೂಸೆಕ್ ನೀರು ಅಣೆಕಟ್ಟೆಗೆ ಹರಿದು ಬರುತ್ತಿರುವುದರಿಂದ ಅಷ್ಟೆ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿರುವ ಕಾರಣದಿಂದ ನದಿಗೆ ಅಷ್ಟೆ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.
ಇದರಿಂದ ಶಿವಮೊಗ್ಗ ನಗರದ ಮಂಟಪ ಮುಕ್ಕಾಲು ತುಂಬಿದೆ. ಉಳಿದಂತೆ ಹೊಸನಗರ ಹಾಗೂ ಸಾಗರ ತಾಲೂಕಿನಲ್ಲಿ ಮಳೆಯಿಂದ ಇಂದು ಬೆಳಗ್ಗೆಯೇ ಅಂಗನವಾಡಿ, ಶಾಲಾ – ಕಾಲೇಜುಗಳಿಗೆ ಆಯಾ ತಾಲೂಕಿನ ತಹಶೀಲ್ದಾರ್ ಅವರು ಎರಡು ತಾಲೂಕಿಗೆ ರಜೆ ಘೋಷಣೆ ಮಾಡಿದ್ದಾರೆ.