ಹುಬ್ಬಳ್ಳಿ: ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆ ಆಗುವಂತೆ ಒತ್ತಾಯಿಸಿ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಸದ್ಯ ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿಯು ನಗರದಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಯುವತಿ ಹಾಗೂ ಆರೋಪಿ ಯುವಕ ಕುಂದಗೋಳದವರಾಗಿದ್ದು, ಮೊದಲಿನಿಂದಲೂ ಪರಿಚಯಸ್ಥರಾಗಿದ್ದರು. ಆರೋಪಿಯು ಯುವತಿಯೊಂದಿನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹಾಗೂ ಕುಟುಂಬಸ್ಥರಿಗೆ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ, ಬೆದರಿಕೆ ಹಾಕಿರುವ ಆರೋಪದ ಮೇಲೆ ಪೋಷಕರಿಂದ ದೂರು ಪಡೆದು ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಮಾಹಿತಿ: ಘಟನೆ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರೀತಿಸುವಂತೆ ಒತ್ತಾಯಿಸಿ, ಆಕೆಯ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿ ಯುವಕ ಬೆದರಿಕೆ ಹಾಕಿದ್ದ. ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲು ಬಂದಿದ್ದ ಆರೋಪಿಯು, ಆಕೆಯ ಕೈ ಹಿಡಿದು ತಿರುವಿ, ಹಲ್ಲೆ ಮಾಡಿದ್ದಾನೆ ಎಂಬ ಆರೋಪವೂ ಇದೆ. ಈ ಬಗ್ಗೆ ಯುವತಿಯ ಪೋಷಕರು ದೂರು ಕೊಟ್ಟಿದ್ದಾರೆ. ಯುವಕನನ್ನು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು.
ಇಬ್ಬರ ಮೊಬೈಲ್ ಫೋನ್ಗಳು ವಶಕ್ಕೆ: ”ಯುವತಿ ಹಾಗೂ ಆರೋಪಿಯ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆಕೆಗೆ ಏನೆಲ್ಲ ತೊಂದರೆ ಆಗಿದೆ ಎಂಬುದರ ವಿವರ ಪಡೆದು ತನಿಖೆ ನಡೆಸಲಾಗುತ್ತದೆ. ಕಿರುಕುಳದ ಬಗ್ಗೆ ಯುವತಿಯು ಮನೆಯವರಿಗೆ ಮಾಹಿತಿ ನೀಡಿರಲಿಲ್ಲ. ಕುಟುಂಬಸ್ಥರಿಗೆ ಎಲ್ಲವನ್ನೂ ತಿಳಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಯುವತಿಗೆ ಯಾವುದೇ ಅಪಾಯವಿಲ್ಲ, ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ. ಬಳಿಕ ಅವಳಿಂದ ಹೆಚ್ಚುವರಿ ಮಾಹಿತಿ ಪಡೆಯಲಾಗುವುದು. ಜೊತೆಗೆ, ಆರೋಪಿಯಿಂದ ಬೇರೆ ಯಾರಿಗಾದರೂ ತೊಂದರೆ ಆಗಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಇದೊಂದು ಅಪರಾಧ ಪ್ರಕರಣವಾಗಿದ್ದು, ನೊಂದವರಿಗೆ ಯಾವ ರೀತಿಯ ತೊಂದರೆ ಆಗಿದೆ ಎಂಬುದರ ಮೇಲೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ವಿವರಿಸಿದರು.
Laxmi News 24×7