ಕಳೆದ ಸಾಲಿನಲ್ಲಿ ಶಿಫಾರಸ್ಸು ಮಾಡಲಾಗಿರುವ ಅಲ್ಪಾವಧಿ ಬೆಳೆಸಾಲದ ಪ್ರಮಾಣವನ್ನು 2023-24 ನೇ ಸಾಲಿಗಾಗಿ ಪ್ರತಿಯೊಂದು ಬೆಳೆಗೆ ಶೇ.10ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
2023-24 ನೇ ಸಾಲಿಗಾಗಿ ಬೆಳೆ ಬೆಳೆಯಲು ಬೆಳೆಸಾಲ ಪ್ರಮಾಣ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ನ.30) ನಡೆದ ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ಸಭೆಯಲ್ಲಿ ನಬಾರ್ಡ್ ಸಿದ್ಧಪಡಿಸಿದ 2023-24ನೇ ಸಾಲಿನ ರೂ. 19,614.45 ಕೋಟಿಯ ಸಂಭಾವ್ಯ ಕ್ರೆಡಿಟ್ ಲಿಂಕ್ಡ್ ಪ್ಲ್ಯಾನ್(ಪಿಎಲ್ ಪಿ) ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಬ್ಬು ಬೆಳೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಖರ್ಚು-ವೆಚ್ಚಗಳಲ್ಲಿ ಗಣನೀಯ ಹೆಚ್ಚಳವಾಗಿರುವುದರಿಂದ ಕಬ್ಬು ಬೆಳೆಸಾಲ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರೈತರು ಮನವಿ ಮಾಡಿಕೊಂಡರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕಳೆದ ಬಾರಿ 56 ಸಾವಿರ ಇರುವುದನ್ನು ಈ ಬಾರಿ 71 ಸಾವಿರ ನಿಗದಿಪಡಿಸಲು ಉಳಿದಂತೆ ತಂಬಾಕು ಸೇರಿ ಎಲ್ಲ ಬೆಳೆಸಾಲ ಪ್ರಮಾಣವನ್ನು ಶೇ.10 ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ರೂ. 9 ಸಾವಿರ ಕೋಟಿ ಬೆಳೆಸಾಲ:
ಜಿಲ್ಲೆಯಲ್ಲಿ ಈ ಬಾರಿ ಆದ್ಯತಾ ವಲಯಕ್ಕೆ ನಬಾರ್ಡ್ ಮೌಲ್ಯಮಾಪನದ ಪ್ರಕಾರ ಒಟ್ಟಾರೆ 19,614.45 ಕೋಟಿ ಸಾಲ ಸಾಮರ್ಥ್ಯವಿದೆ ಅದರಲ್ಲಿ ಕೃಷಿಸಾಲ ಸಂಭಾವ್ಯತೆ 9,780.41 ಕೋಟಿ ಬೆಳೆಸಾಲವನ್ನು ನೀಡಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಪಾಟೀಲ ತಿಳಿಸಿದರು.
ರೈತರು ಬೆಳೆಸಾಲವನ್ನು ಬ್ಯಾಂಕುಗಳಿಂದಲೇ ಪಡೆದುಕೊಳ್ಳಬೇಕು. ಖಾಸಗಿ ಲೇವಾದೇವಿಗಾರರು ಅಥವಾ ಮೀಟರ್ ಬಡ್ಡಿಯ ಮೇಲೆ ಪಡೆದುಕೊಂಡು ಸಂಕಷ್ಟಕ್ಕೀಡಾಗಬಾರದು ಎಂದು ಸಲಹೆ ನೀಡಿದರು.
1.60 ಲಕ್ಷವರೆಗಿನ ಬೆಳೆಸಾಲಕ್ಕೆ ಭೋಜಾ ಇಲ್ಲ:
1.60 ಲಕ್ಷ ವರೆಗೆ ಯಾವುದೇ ದಾಖಲೆಗಳಿಲ್ಲದೇ ಪಹಣಿ ಮತ್ತಿತರ ಸರಳ ದಾಖಲೆಗಳ ಆಧಾರದ ಮೇಲೆ ಸಾಲವನ್ನು ನೀಡಬೇಕು. ಈ ಸಾಲಕ್ಕೆ ಭೋಜಾ ಏರಿಸುವುದಿಲ್ಲ. ಒಂದು ವೇಳೆ 1.60 ಲಕ್ಷ ಬೆಳೆಸಾಲಕ್ಕೆ ಭೋಜಾ ಏರಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
1.60 ಲಕ್ಷ ವರೆಗೆ ಯಾವುದೇ ದಾಖಲೆಗಳಿಲ್ಲದೇ ಸಾಲವನ್ನು ನೀಡಲಾಗುತ್ತದೆ. ಈ ಸಾಲಕ್ಕೆ ಭೋಜಾ ಏರಿಸುವುದಿಲ್ಲ ಎಂದು ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಸುಧೀಂದ್ರ ಕುಲಕರ್ಣಿ ತಿಳಿಸಿದರು.